ಚಾಮರಾಜನಗರ: ನಗರದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್ ಇಲ್ಲದ ವೇಳೆ ಗ್ಲುಕೋಸ್ ಬಾಟಲ್ ಬದಲಿಸಿ ಮಾನವೀಯತೆ ಮೆರೆದಿದ್ದ ಸೆಕ್ಯೂರಿಟಿ ಗಾರ್ಡ್ ಸತೀಶ್ ಅವರನ್ನು ಆಸ್ಪತ್ರೆಯ ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ.
ಕಳೆದ ಜ. 10ರಂದು ರೋಗಿಯೊಬ್ಬರು ತೊಂದರೆಗೆ ಒಳಗಾಗಿದ್ದರಿಂದ ಅವರಿಗೆ ಗ್ಲೂಕೋಸ್ ಬಾಟಲಿ ಹಾಕಲಾಗಿತ್ತು. ಅದು ಮುಗಿದ ಕೂಡಲೇ ತೆಗೆಯಬೇಕಾಗಿತ್ತು. ಈ ಬಗ್ಗೆ ರೋಗಿಯ ಸಂಬಂಧಿಗಳು ನರ್ಸ್ಗಳಿಗೆ ಹೇಳಿದರೂ ಯಾರೂ ಸ್ಪಂದಿಸಿರಲಿಲ್ಲ. ಇದರಿಂದ ಕೂಡಲೇ ಓಡಿ ಬಂದ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಸತೀಶ್ ಖಾಲಿಯಾಗಿದ್ದ ಗ್ಲೂಕೋಸ್ ಬಾಟಲಿ ತೆಗೆದು ರೋಗಿಯ ಪ್ರಾಣ ಉಳಿಸಿದ್ದರು.
ಆದರೆ ಆಸ್ಪತ್ರೆಯ ಆಡಳಿತ ಮಂಡಳಿ, ತಪ್ಪು ಮಾಡಿದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅಪಾಯ ತಪ್ಪಿಸಿದ ಸೆಕ್ಯೂರಿಟಿ ಗಾರ್ಡ್ ಅವರನ್ನು ಅಮಾನತುಗೊಳಿಸಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಜಿಲ್ಲಾಸ್ಪತ್ರೆಯ ಸರ್ಜನ್ ರಘುರಾಮ್, ಸೆಕ್ಯುರಿಟಿ ಗಾರ್ಡ್ ಸತೀಶ್ನನ್ನು ಕೆಲಸದಿಂದ ತೆಗೆದಿರುವ ವಿಚಾರ ನನಗೆ ಗೊತ್ತಿಲ್ಲ. ಒಂದು ವೇಳೆ ತೆಗೆದಿದ್ದರು ನನಗೂ ಅದಕ್ಕೂ ಸಂಬಂಧವಿಲ್ಲ. ಮೇಲಾಗಿ ನಾನು ಎರಡು ದಿನಗಳಿಂದ ಚಾಮರಾಜನಗರದಲ್ಲಿ ಇಲ್ಲ. ಯಾರೋ ಸುಮ್ನೆ ನನ್ನ ಹೆಸರು ತಳುಕು ಹಾಕಿದ್ದಾರೆ ಎಂದಿದ್ದಾರೆ.