ರಾಮನಗರ, ಡಿ. 31: ಕಪಾಲ ಬೆಟ್ಟದಲ್ಲಿ ಏಸುವಿನ ಪ್ರತಿಮೆ ನಿರ್ಮಾಣ ವಿಚಾರಕ್ಕೆ ಹಲವು ಪರ ವಿರೋಧಗಳು ಕೇಳಿಬರುತ್ತಿವೆ. ಈ ಮಧ್ಯೆ, ಪ್ರತಿಮೆ ನಿರ್ಮಾಣ ಕಾಮಗಾರಿಯನ್ನೇ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.
ಕಪಾಲ ಬೆಟ್ಟ ಸದ್ಯ ಪೊಲೀಸ್ ಭದ್ರತೆಯಲ್ಲಿದ್ದು, ಸಾತನೂರು ಪೊಲೀಸರು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಬೆಲೆಯಲ್ಲಿರುವ ಈ ಬೆಟ್ಟಕ್ಕೆ ಭದ್ರತೆ ನೀಡಿದ್ದಾರೆ.
ಇನ್ನೊಂದೆಡೆ, ಏಸು ಕ್ರಿಸ್ತ ಪ್ರತಿಮೆ ನಿರ್ಮಾಣ ವಿಚಾರ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಕನಕಪುರ ತಹಶೀಲ್ದಾರ್ ಆನಂದಯ್ಯ ದಿಢೀರ್ ವರ್ಗಾವಣೆಯಾಗಿದ್ದಾರೆ. ಯಳಂದೂರು ತಹಶೀಲ್ದಾರ್ ಆಗಿದ್ದ ವರ್ಷ ಅವರನ್ನು ಕನಕಪುರ ತಹಶೀಲ್ದಾರ್ ಆಗಿ ನೇಮಕ ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆರ್.ಉಮಾದೇವಿ ಸೋಮವಾರ ರಾತ್ರಿ ಆದೇಶ ಹೊರಡಿದ್ದಾರೆ.