ಬೆಂಗಳೂರು, ಸೆ. 9: ನಾನು ಡಾಕ್ಟರ್ ಆಗ್ಬೇಕು, ಇಂಜಿನೀಯರ್ ಆಗ್ಬೇಕು, ಲಾಯರ್ ಆಗ್ಬೇಕು, ವಿಜ್ಞಾನಿ ಆಗ್ಬೇಕು ಅನ್ನೋ ಆಸೆ ಯಾವ ಮಕ್ಕಳಿಗೆ ತಾನೆ ಇರೋದಿಲ್ಲ ಹೇಳಿ. ಇಂಥಂದ್ದೇ ಒಂದು ಆಸೆಯನ್ನ ಈ ಮಕ್ಕಳು ಇಟ್ಕೊಂಡಿದ್ರು. ಅದು ಪೊಲೀಸ್ ಆಗ್ಬೇಕು ಅನ್ನೋ ಆಸೆ. ಆದರೆ ಆ ಭಗವಂತ ಇವರ ಹಣೆ ಬರಹದಲ್ಲಿ ಅದನ್ನ ಬರದೇ ಇಲ್ಲ. ಅದ್ಯಾಕೆ ಅಂತೀರಾ…
ಈ ಮಕ್ಕಳ ಆಯಸ್ಸು ತುಂಬಾನೇ ಕಡಿಮೆ. ಹೀಗಾಗಿ ಇವರಿಗಿರೋ ಅಲ್ಪ ಆಯಸ್ಸಿನಲ್ಲೇ ಇವರು ಕಾಣುವ ದೊಡ್ಡ ಕನಸನ್ನ ಈಡೇರಿಸಿಕೊಳ್ಳೋಕೆ ಅನುವು ಮಾಡಿಕೊಟ್ಟಿದ್ದ ಬೆಂಗಳೂರಿನ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್.
ಪೊಲೀಸ್ ವಸ್ತ್ರವನ್ನ ಧರಿಸಿ ಮುಗುಳು ನಗೆ ಬೀರುತ್ತಿರುವ 5 ಮಕ್ಕಳಾದ ರುತನ್ ಕುಮಾರ್, ಮಹಮದ್ ಶಕೀಬ್, ಅರ್ಷಾಥ್ ಪಾಷಾ, ಶ್ರಾವಣಿ ಬಂಟ್ಟಾಳ, ಸಯ್ಯದ್ ಇಮಾದ್ ವಿವಿಧ ಖಾಯಿಲೆಯಿಂದ ಬಳಲುತ್ತಿದ್ದಾರೆ.
ಈ ಮಕ್ಕಳ ಆಸೆ ಪೊಲೀಸ್ ಆಯುಕ್ತರಾಗಬೇಕು ಅನ್ನೋದು. ಇವರ ಆಸೆಯನ್ನ ಸದ್ಯ ಬೆಂಗಳೂರಿನ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಈಡೇರಿಸಿ ಆ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
5 ಮಕ್ಕಳಿಗೆ ಗಾರ್ಡ್ ಆಫ್ ಹಾನರ್ ಕೊಟ್ಟು ಕಮೀಷನರ್ ಸೀಟ್ ಅಲಂಕರಿಸಲು ಅನುವು ಮಾಡಿಕೊಟ್ಟು, ಮಕ್ಕಳ ಮೊಗದಲ್ಲಿ ನಗೆ ಬೀರುವಂತೆ ಮಾಡಿದ್ದಾರೆ. ಡಾಗ್ ಸ್ಕ್ವಾಡ್ ಕರೆದು ಅವರನ್ನ ಪರಿಚಯ ಮಾಡಿಸುವ ಕೆಲಸ ಕೂಡ ಮಾಡಿ ಪುಟಾಣಿಗಳ ಆಸೆ ಈಡೇರಿಸಿದ್ದಾರೆ.
ಪೊಲೀಸ್ ಆಯುಕ್ತರಾಗಿ ಕೆಲ ನಿಮಿಷಗಳ ಕಾಲ ಅಧಿಕಾರ ಚಲಾಯಿಸಿದ ಪುಟಾಣಿಗಳು ಸಂತಸ ವ್ಯಕ್ತಪಡಿಸಿದ್ದಾರೆ.