ಬೆಂಗಳೂರು, ಏ. 27, ನ್ಯೂಸ್ ಎಕ್ಸ್ ಪ್ರೆಸ್: ಏ.21 ರಂದು ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಬೆನ್ನಲ್ಲೇ ಭಾರತದ ಮೇಲೂ ಉಗ್ರರ ಕರಿ ನೆರಳು ಬಿದ್ದಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಸಂಚರಿಸುವ ರೈಲುಗಳನ್ನು ಗುರಿಯಾಗಿಸಿಕೊಂಡು ಉಗ್ರರು ಸ್ಫೋಟ ನಡೆಸಬಹುದು ಎಂಬ ಭೀತಿ ಉಂಟಾಗಿದೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನಿಲಮಣಿ ಎನ್. ರಾಜು ಅವರು, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಪೊಲೀಸ್ ಮುಖ್ಯಸ್ಥರು, ಬೆಂಗಳೂರು ರೈಲ್ವೆ ವಿಭಾಗದ ಮುಖ್ಯಸ್ಥರು, ನವದೆಹಲಿಯ ಪೊಲೀಸ್ ಮುಖ್ಯಸ್ಥರು(ಆರ್ಪಿಎಫ್), ರಾಜ್ಯ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಆಯುಕ್ತರು, ನಗರ ಪೊಲೀಸ್ ಆಯುಕ್ತರು, ಬೆಂಗಳೂರು ಗುಪ್ತಚರ ವಿಭಾಗಕ್ಕೆ ಪತ್ರ ಬರೆದು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸಂದೇಶ ರವಾನಿಸಿದ್ದಾರೆ.