ಬೆಂಗಳೂರು, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ದಿವಂಗತ ಅನಂತ್ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕದೆ, ಶಾಸಕ ರವಿ ಸುಬ್ರಹ್ಮಣ್ಯ ಅಣ್ಣನ ಪುತ್ರ ತೇಜಸ್ವಿ ಸೂರ್ಯನಿಗೆ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ತೇಜಸ್ವಿನಿ ಅವರ ಬೆಂಬಲಿಗರು ಪಕ್ಷದ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇಂದು ಬೆಳಗ್ಗೆ ತೇಜಸ್ವಿನಿ ಅನಂತ್ಕುಮಾರ್ ಅವರನ್ನು ಭೇಟಿ ಮಾಡಲು ಮನೆಗೆ ಬಂದ ತೇಜಸ್ವಿ ಸೂರ್ಯನನ್ನು ಮನೆ ಎದುರು ಅಡ್ಡಗಟ್ಟಿದ ನೂರಾರು ಬಿಜೆಪಿ ಕಾರ್ಯಕರ್ತರು, “ಸೂರ್ಯ, ನೀವು ಸರಿಯಾದ ಕ್ಯಾಂಡಿಡೇಟ್ ಅಲ್ಲ. ನಿಮ್ಮ ಡಿಬೇಟ್ಗಳನ್ನ ನಾವು ನೋಡುತ್ತಾ ಇದ್ದೀವೆ, ನಿಮಗೆ ನಿಭಾಯಿಸುವ ಶಕ್ತಿ ಇಲ್ಲ” ಎಂದು ಕಿಡಿಕಾರಿದ್ದಾರೆ.
ಈತ(ತೇಜಸ್ವಿ) ಯಾರು ಅಂತಲೇ ನಮಗೆ ಗೊತ್ತಿಲ್ಲ. ತೇಜಸ್ವಿನಿ ನನ್ನ ತಾಯಿ ಸಮಾನ ಎಂದು ಹೇಳುತ್ತಾರೆ ಅವರು. ಆದರೆ, ತಾಯಿಗೇ ದ್ರೋಹ ಮಾಡ್ತಿದ್ದಾರೆ,” ಎಂದು ಆಕ್ರೋಶ ಹೊರಹಾಕಿದ ಕಾರ್ಯಕರ್ತರು, “ಬೇಕೇ ಬೇಕು ನ್ಯಾಯ ಬೇಕು. ಅಮರ್ ರಹೇ ಅಮರ್ ರಹೇ ಅನಂತ್ಕುಮಾರ್ ಅಮರ್ ರಹೇ” ಎಂದು ಘೋಷಣೆ ಕೂಗಿದ್ದಾರೆ.
ಈ ಎಲ್ಲಾ ವಿರೋಧದ ಮಧ್ಯೆಯೇ ತೇಜಸ್ವಿ ಸೂರ್ಯ ತೇಜಸ್ವಿನಿ ಅನಂತ್ಕುಮಾರ್ ಅವರ ಆಶೀರ್ವಾದ ಪಡೆದು ಬೆಂಬಲಿಸುವಂತೆ ಕೋರಿದ್ದಾರೆ.