ಬೆಂಗಳೂರು: ಟೀಂ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅವರು ಇಂಜ್ಯೂರಿಯಿಂದ ಬಳಲುತ್ತಿದ್ದರು. ಜಸ್ಪ್ರೀತ್ ಬುಮ್ರಾ ಐರ್ಲೆಂಡ್ ವಿರುದ್ಧದ T20 ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸಿಕೊಳ್ಳುವ ಮೂಲಕ ಸುಮಾರು 11 ತಿಂಗಳ ಬಳಿಕ ಫೀಲ್ಡ್’ಗೆ ಮರಳಿದ್ದರು. ಇದಾದ ಬಳಿಕ ಏಷ್ಯಾಕಪ್ ಆಡಲು ಶ್ರೀಲಂಕಾಕ್ಕೆ ತೆರಳಿದ್ದರು.
ಟೀಂ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಮನೆಗೆ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದಾರೆ. ಬುಮ್ರಾ ಪತ್ನಿ ಸಂಜನಾ ಗಣೇಶನ್ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕಾರಣದಿಂದಲೇ ಬುಮ್ರಾ ಏಷ್ಯಾ ಕಪ್-2023 ಕ್ರಿಕೆಟ್ ಪಂದ್ಯಾವಳಿಯನ್ನು ಅರ್ಧಕ್ಕೆ ಬಿಟ್ಟು ಶ್ರೀಲಂಕಾದಿಂದ ಮುಂಬೈಗೆ ಮರಳಿದ್ದಾರೆ.
ಬುಮ್ರಾ ಸೋಮವಾರ ಇನ್ಸ್ಟಾಗ್ರಾಂನಲ್ಲಿ ತಮ್ಮ ಕಂದಮ್ಮನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ “ನಮ್ಮ ಚಿಕ್ಕ ಕುಟುಂಬ ಈಗ ಬೆಳೆದಿದೆ. ನಾವು ಊಹಿಸಿದ್ದಕ್ಕಿಂತ ಹೆಚ್ಚಾಗಿ ಮನತುಂಬಿದೆ. ಇಂದು ಬೆಳಿಗ್ಗೆ ನಾವು ನಮ್ಮ ಮಗ ‘ಅಂಗದ್ ಜಸ್ಪ್ರೀತ್ ಬುಮ್ರಾ’ ಅವರನ್ನು ಜಗತ್ತಿಗೆ ಸ್ವಾಗತಿಸಿದ್ದೇವೆ. ನಮ್ಮ ಜೀವನದ ಈ ಹೊಸ ಅಧ್ಯಾಯವಿದು” ಎಂದು ಶೀರ್ಷಿಕೆ ಬರೆದಿದ್ದಾರೆ.