ಮಂಡ್ಯ, ಸೆ. 28: ಸಂಕಷ್ಟದಲ್ಲಿರುವ ರೈತರ ನೆರವಿಗೆ ಜೋಡೆತ್ತು ಬರಬೇಕು ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಆಗ್ರಹಿಸಿದರು. “ರೈತರು ಕಬ್ಬಿಗೆ ಬೆಂಕಿ ಹಚ್ಚುವ ಪರಿಸ್ಥಿತಿ ಬಂದೊದಗಿದೆ. ಕಳೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ಮಾಡಲು ಜೋಡೆತ್ತು ಬಂದಿದ್ದವು. ಇಲ್ಲಿನ ರೈತರ ಜೊತೆಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದರು. ಇದೀಗ ಸಂಕಷ್ಟಕ್ಕೆ ಸಿಲುಕಿದ ರೈತರ ಕಣ್ಣೊರೆಸಲು ದರ್ಶನ್-ಯಶ್ ಬರಲಿ” ಎಂದು ವ್ಯಂಗ್ಯವಾಡಿದರು.
ಮಂಡ್ಯದ ನಾಗಮಂಗಲದಲ್ಲಿ ಮಾತಾಡಿದ ಮಾಜಿ ಸಿಎಂ ಶಿವರಾಮೇಗೌಡ, ಸುಮಲತಾರನ್ನು ಗೆಲ್ಲಿಸಲು ಜೋಡೆತ್ತು ಬಂದಿದ್ದವು. ರೈತರೊಂದಿಗೆ ನಾವಿದ್ದೇವೆ ಎಂದು ಹೇಳಿದ್ದ ಜೋಡೆತ್ತು ಈಗ ನಾಪತ್ತೆಯಾಗಿವೆ. ನಮ್ಮ ಸಮಸ್ಯೆ ಆಲಿಸಿ ಎಂದು ರೈತರು ಬಡೆದುಕೊಂಡರೂ, ಸುಮಲತಾ ಬರುತ್ತಿಲ್ಲ. ಸದ್ಯ ಜೋಡೆತ್ತು, ಸಂಸದೆ ಸುಮಲತಾರನ್ನು ಹುಡುಕಿಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.