ಬೆಂಗಳೂರು, ಮಾ, 30, ನ್ಯೂಸ್ ಎಕ್ಸ್ ಪ್ರೆಸ್: ಎಟಿಎಂ ಕಾವಲುಗಾರನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಕುಮಾರಸ್ವಾಮಿ ಲೇಔಟ್ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯ ನಿವಾಸಿ ರಾಜೇಂದ್ರ ಅಲಿಯಾಸ್ ರಾಜ(28) ಅಲಿಯಾಸ್ ಬೆಂಕಿರಾಜ ಅಲಿಯಾಸ್ ಸೈಕೋ ರಾಜ ಗುಂಡೇಟಿನಿಂದ ಗಾಯಗೊಂಡಿರುವ ಕೊಲೆ ಆರೋಪಿ. ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾ.24ರ ಬೆಳಗಿನ ಜಾವ ಕರ್ನಾಟಕ ಬ್ಯಾಂಕ್ ಎಟಿಎಂ ಕಾವಲುಗಾರ ಲಿಂಗಪ್ಪ ಅವರ ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಮಾದಕವ್ಯಸನಿಯಾಗಿದ್ದ ಈತ ಗಾಂಜಾ ಖರೀದಿಸಲು ಹಣವಿಲ್ಲದಿದ್ದಾಗ ಸೈಕೋ ರೀತಿ ವರ್ತಿಸುತ್ತಿದ್ದ. ಮಾತ್ರವಲ್ಲ ಹಣಕ್ಕಾಗಿ ಕೊಲೆ ಮಾಡಲು ಹಿಂದೆಮುಂದೆ ನೋಡುತ್ತಿರಲಿಲ್ಲ.
ಎಟಿಎಂ ಕಾವಲುಗಾರ ಲಿಂಗಪ್ಪನನ್ನು ಕೊಲೆ ಮಾಡಿದ ನಂತರ ಸೈಕೋ ರಾಜೇಂದ್ರ ಗಾಂಜಾಕ್ಕಾಗಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಈ ಸಂಜೆಗೆ ತಿಳಿಸಿದ್ದಾರೆ. ಆರೋಪಿ ರಾಜೇಂದ್ರನನ್ನು ಬಂಧಿಸಲು ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ಮಹದೇವ ಅವರ ಮಾರ್ಗದರ್ಶನದಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆ ಇನ್ಸ್ಪೆಕ್ಟರ್ ಹಜರೀಶ್ ಕಿಲ್ಲಾದರ್, ತಲಘಟ್ಟಪುರ ಪಿಎಸ್ಐ ಶಿವಕುಮಾರ್, ಕೋಣನಕುಂಟೆ ಪಿಎಸ್ಐ ಶ್ರೀನಿವಾಸ್ ಪ್ರಸಾದ್ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.