ಮೈಸೂರು, ಮಾ.6, ನ್ಯೂಸ್ ಎಕ್ಸ್ ಪ್ರೆಸ್: ನವದೆಹಲಿಯಲ್ಲಿ ಇಂದು ನಡೆದ ಸ್ವಚ್ಛ ಸರ್ವೇಕ್ಷಣೆ – 2019ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿಗೆ ದೇಶದ 3 ಸ್ಛಚ್ಛ ನಗರ ಎಂಬ ಬಿರುದು ಸಿಕ್ಕಿದೆ. ಕಳೆದ ಬಾರಿ ಮೈಸೂರು 5ನೇ ಸ್ಥಾನದಲ್ಲಿತ್ತು.
ಈ ಬಾರಿಯಾದರೂ ಮೈಸೂರಿಗೆ ಮೊದಲನೇ ಸ್ಥಾನ ದಕ್ಕಬಹುದು ಎಂಬ ಖುಷಿಯಲ್ಲಿದ್ದ ಮೈಸೂರಿಗರಿಗೆ ಕೊಂಚ ನಿರಾಶೆಯಾಗಿದ್ದು, ಇದೀಗ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಇಂದೋರ್ ಗೆ ಮೊದಲನೇ ಸ್ಥಾನ ಲಭಿಸಿದರೆ, ಅಂಬಿಕಾಪುರ್ ಗೆ 2ನೇ ಸ್ಥಾನ ಸಿಕ್ಕಿದೆ.
ಅಂದಹಾಗೆ ಮೈಸೂರಿಗೆ 5000ಕ್ಕೆ 4,379 ಅಂಕ ಲಭಿಸಿದ್ದು, ಮೈಸೂರಿಗೆ 3ನೇ ಸ್ಥಾನ ಲಭಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಸ್ವಚ್ಛ ಸರ್ವೇಕ್ಷಣದಲ್ಲಿ ಮೈಸೂರು ಮಹಾನಗರ ಪಾಲಿಕೆಯೂ ನಾಮ ನಿರ್ದೇಶನಗೊಂಡಿರುವ ಹಿನ್ನೆಲೆಯಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದಲ್ಲಿ ಉಪ ಮೇಯರ್ ಮಹಮ್ಮದ್ ಶಫಿ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್, ಹಿಂದಿನ ಆಯುಕ್ತ ಜಗದೀಶ್ ಮತ್ತು ಆರೋಗ್ಯಾಧಿಕಾರಿ ಡಾ.ನಾಗರಾಜ್ ಮಂಗಳವಾರ ಬೆಂಗಳೂರಿನಿಂದ ವಿಮಾನದಲ್ಲಿ ನವದೆಹಲಿಗೆ ಪ್ರಯಾಣ ಬೆಳೆಸಿದ್ದರು.