ಬೆಂಗಳೂರು, ಮೇ.7, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರಿನಲ್ಲಿ ಮತ್ತೊಂದು ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಹೊಸ ಮನೆಗೆ ಮಗಳನ್ನು ಬಲಿ ಕೊಟ್ಟಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಬೆಂಗಳೂರಿನ ರಾಜಗೋಪಾಲನಗರದಲ್ಲಿ ಬೆಳಗ್ಗೆ ಒಂಬತ್ತು ಘಂಟೆ ಸುಮಾರಿಗೆ ಸಂಪ್ನಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿದೆ. ರಾಯಚೂರು ಮೂಲದ ಪಾರ್ತತಮ್ಮ ಮತ್ತು ಬುಗ್ಗಪ್ಪ ದಂಪತಿಯ ಪುತ್ರಿ ಜ್ಯೋತಿ (15) ಅಸುನೀಗಿದ ಬಾಲಕಿ. ರಾಜಗೋಪಾಲನಗರದಲ್ಲಿ ಅಲ್ಪರಾಜ್ ಎಂಬುವವರ ಮನೆಯಲ್ಲಿ ತಾಯಿ ಜೊತೆಗೆ ಬಾಲಕಿ ಕೆಲಸ ಹೋಗಿದ್ದಾಗ ಈ ಘಟನೆ ನಡೆದಿದೆ. ತಾಯಿ ಜೊತೆಗೆ ಬಾಲಕಿ ಮನೆ ಕೆಲಸಕ್ಕೆ ಅಲ್ಪರಾಜ್ ಮನೆಗೆ ತೆರಳಿದ್ದಳು. ಆದರೆ ಈ ವೇಳೆ ಬಾಲಕಿ ನಾಪತ್ತೆಯಾಗಿದ್ದಾಳೆ. ಅನುಮಾನಗೊಂಡ ಪೋಷಕರು ಬೀಗ ಹಾಕಿರುವ ಸಂಪ್ಬಾಗಿಲು ತೆರೆಯುವಂತೆ ಪೋಷಕರು ಆಗ್ರಹಿಸಿದರೂ ಮನೆ ಮಾಲೀಕ ಸಂಪ್ ಬೀಗ ತೆಗೆದಿಲ್ಲ. ನಂತರ ಪೊಲೀಸರು ಬಂದು ಬೀಗ ತೆರೆದಾಗ ಬಾಲಕಿ ಶವ ಸಂಪ್ನಲ್ಲಿ ಇದ್ದದ್ದು ಬೆಳಕಿಗೆ ಬಂದಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮನೆ ಮಾಲೀಕ ಅಲ್ಪರಾಜ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲ್ಲೇಶ್ವರಂ ಎಸಿಪಿ ನೇತೃತ್ವದಲ್ಲಿ ಅಲ್ಪರಾಜ್ ನನ್ನ ಮನೆ ಬಳಿ ಕರೆದು ತಂದು ಮಹಜರು ಮಾಡಲಾಗಿದೆ. ಮನೆಗೆ ಶಾಂತಿ ಮಾಡುವ ಸಲುವಾಗಿ ಮಗಳನ್ನು ಬಲಿ ಕೊಟ್ಟಿದ್ದಾರೆ ಎಂದು ಮೃತ ಬಾಲಕಿಯ ಪೋಷಕರು ಆರೋಪ ಮಾಡಿದ್ದಾರೆ.