ಮಂಡ್ಯ, ಏ. 16, ನ್ಯೂಸ್ ಎಕ್ಸ್ ಪ್ರೆಸ್ : ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಬಿಜೆಪಿ ಸೇರೋದು ಪಕ್ಕಾ ಅನ್ನೋ ಮಾತು ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಬಗ್ಗೆ ಮಾತನಾಡಿರುವ ಸಚಿವ ಸಿ.ಎಸ್ ಪುಟ್ಟರಾಜು, ಬಿಜೆಪಿ ನಾಯಕರ ಜೊತೆ ಈಗಾಗಲೇ ಸುಮಲತಾ ಚರ್ಚೆ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಕೆ.ಆರ್ ಪೇಟೆಯಲ್ಲಿ ನಡೆದ ಸಮಾವೇಶದಲ್ಲಿ ಜೆಡಿಎಸ್ ನಾಯಕರು ಸುಮಲತಾ ಬಗ್ಗೆ ಇದೇ ವಿಚಾರ ಪ್ರಸ್ತಾಪ ಮಾಡಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಕದೇ ಇರುವ ಬಗ್ಗೆ ಯಡಿಯೂರಪ್ಪ ಸ್ವಗ್ರಾಮ ಬೂಕನಕೆರೆಯಲ್ಲೇ ಜನ ಟೀಕೆ ಮಾಡುತ್ತಿದ್ದಾರೆ.
ಆದರೆ, ಸುಮಲತಾ ರಾತ್ರಿ ಹೊತ್ತು ಹೋಗಿ ಯಡಿಯೂರಪ್ಪ ಅವರನ್ನು ಮೀಟ್ ಮಾಡಿ ಆಶಿರ್ವಾದ ಪಡೆಯುತ್ತಾರೆ. ಎಸ್.ಎಂ ಕೃಷ್ಣ ಅವರ ಮನೆಗೂ ಹೋಗಿ ಬರ್ತಾರೆ.
ಆದರೆ, ಬಿಜೆಪಿ ನಾಯಕರು ಪ್ರಚಾರಕ್ಕೆ ಬಂದರೆ ಮುಸ್ಲಿಂ ಸಮುದಾಯದ ವೋಟ್ ಕೈ ತಪ್ಪುತ್ತೆ ಅನ್ನೋ ಕಾರಣಕ್ಕೆ ಈ ಸಂಚು ಮಾಡಿದ್ದಾರೆ ಎಂದು ಸಚಿವ ಪುಟ್ಟರಾಜು ಟೀಕಿಸಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಮಾತನಾಡಿ, ದೇಶದ ಚುನಾವಣೆಯನ್ನು ಜಗತ್ತು ನೋಡುತ್ತಿದೆ. 2 ತತ್ವಗಳ ನಡುವೆ ಚುನಾವಣೆ ನಡೀತಾ ಇದ್ದು, ಮೋದಿಯನ್ನ ಹೊಗಳುವವರು ರಾಷ್ಟ್ರಪ್ರೇಮಿಗಳು. ತೆಗಳುವವರು ರಾಷ್ಟ್ರದ್ರೋಹಿಗಳು ಎಂದು ಬಿಂಬಿಸಲಾಗ್ತಿದೆ. ಸುಮಲತಾ ಅವರನ್ನ ಬಿಜೆಪಿ ಅಭ್ಯರ್ಥಿಯನ್ನಾಗಿ ಹಿಂಬಾಗಿಲಿನಿಂದ ಬಿಟ್ಟಿದ್ದಾರೆ. ಸುಮಲತಾ ಪಕ್ಷೇತರ ಅಭ್ಯರ್ಥಿ ಅಲ್ಲ ಅಂದರು.
ಸಮಾವೇಶದಲ್ಲಿ ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್ ಮಾತನಾಡಿ, ಸುಮಲತಾ ಪಕ್ಷೇತರ ಅಭ್ಯರ್ಥಿ ಅಲ್ಲ, ಅವರು ಬಿಜೆಪಿ ಅಭ್ಯರ್ಥಿ. ಸುಮಲತಾ ಗೆದ್ದರೆ ಅವರು ಬಿಜೆಪಿಗೆ ಹೋಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.