ರಾಯಚೂರು, ಮಾ.9, ನ್ಯೂಸ್ ಎಕ್ಸ್ ಪ್ರೆಸ್: ಸುಮಲತಾ ಅಂಬರೀಶ್ಗೆ ನಮ್ಮ ಬೆಂಬಲ. ರೇವಣ್ಣಗೆ ಜನರೇ ಉತ್ತರಿಸುತ್ತಾರೆ. ಸುಮಲತಾ ಅಂಬರೀಶ್ ರಾಜಕೀಯ ಪ್ರವೇಶಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ನಟ ದೊಡ್ಡಣ್ಣ ಹೇಳಿದ್ದಾರೆ.
ಇಂದು ಮಂತ್ರಾಲಯದಲ್ಲಿ ಹಿರಿಯ ನಟ ದೊಡ್ಡಣ್ಣ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಲತಾ ಅಂಬರೀಶ್ ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿದ್ದು, ಅವರ ಪ್ರಚಾರಕ್ಕೆ ಸ್ಯಾಂಡಲ್ವುಡ್ ತೆರಳಲಿದೆ ಎಂದು ಹೇಳಿದರು.
ಅನುಕೂಲಕ್ಕೆ ತಕ್ಕಂತೆ ಮಂಡ್ಯಕ್ಕೆ ತೆರಳಿ ಪ್ರಚಾರದಲ್ಲಿ ಭಾಗವಹಿಸುತ್ತೇವೆ ಎಂದು ದೊಡ್ಡಣ್ಣ, ಅಂಬರೀಶ್ ಒಬ್ಬ ಅಜಾತಶತ್ರುವಾಗಿ ಜೀವನ ಸಾಗಿಸಿ, ಕಷ್ಟದಲ್ಲಿ ಇರುವವರಿಗೆ ದಾನ ಧರ್ಮ ಮಾಡಿದ್ದಾರೆ. ಕಲಿಯುಗ ಕರ್ಣನಂತೆ ಬಾಳಿದ್ದಾನೆ. ಅಂಬರೀಶ್ರವರು ಚಿತ್ರ ರಂಗಕ್ಕೆ ನೀಡಿದ ಅಪಾರವಾದ ಕೊಡುಗೆ ಅವರ ಋಣಭಾರ ನಮ್ಮ ಮೇಲಿದೆ ಎಂದರು.
ರೇವಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅದಕ್ಕೆ ಜನರೇ ಉತ್ತರಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಅಂತಿಮ ತೀರ್ಮಾನ ನೀಡುತ್ತಾರೆ. ಜನರಿಗೆ ಯಾರಿಗೆ ಮನೆಗೆ ಕಳುಹಿಸಬೇಕು ಎನ್ನುವುದು ಗೊತ್ತಿದೆ. ಯಾಕೆಂದ್ರೆ ಜನರೇ ದೇವರು ಎಂದು ಹೇಳಿದರು.