ಸುಮಲತಾಗೆ ಎಸ್.ಎಂ.ಕೃಷ್ಣ ಆಶಿರ್ವಾದ!

ಸುಮಲತಾಗೆ ಎಸ್.ಎಂ.ಕೃಷ್ಣ ಆಶಿರ್ವಾದ!

ಬೆಂಗಳೂರು,ಮಾ.15, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವ ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತಾ ಇಂದು ಕೇಂದ್ರದ ಮಾಜಿ ಸಚಿವ, ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ನಿವಾಸಕ್ಕೆ ಆಗಮಿಸಿದ ಸುಮಲತಾ ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ ತಮಗೆ ಬೆಂಬಲ ನೀಡಬೇಕೆಂದು ಕೋರಿದ್ದಾರೆ.

ಮಂಡ್ಯದಲ್ಲಿ ತಮ್ಮ ಪರ ಪ್ರಚಾರ ನಡೆಸಬೇಕೆಂದು ಮನವಿ ಮಾಡಿಕೊಂಡ ಸುಮಲತಾ, ಜಿಲ್ಲೆಯಲ್ಲಿ ತಮ್ಮ ಬೆಂಬಲಿಗರಿಗೂ ನನ್ನ ಪರ ಪ್ರಚಾರ ನಡೆಸುವಂತೆ ಸೂಚಿಸಬೇಕೆಂದು ಕೋರಿಕೊಂಡಿದ್ದಾರೆ.

ಸುಮಲತಾ ಅವರ ಮನವಿಗೆ ಸ್ಪಂದಿಸಿರುವ ಎಸ್.ಎಂ.ಕೃಷ್ಣ, ನಾನು ಬಿಜೆಪಿ ಅಭ್ಯರ್ಥಿಗಳ ಪರ ಸಕ್ರಿಯವಾಗಿ ಪ್ರಚಾರ ನಡೆಸಿ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ನನ್ನದೇ ಆದ ಕಿರು ಸೇವೆಯನ್ನು ಸಲ್ಲಿಸಬೇಕೆಂದು ತೀರ್ಮಾನಿಸಿದ್ದೇನೆ.

ಅಗತ್ಯ ಕಂಡುಬಂದರೆ ಮಂಡ್ಯ ಜಿಲ್ಲೆಗೂ ಬಂದು ನಿಮ್ಮ ಪರವಾಗಿ ಪ್ರಚಾರ ಮಾಡುತ್ತೇನೆ. ನನ್ನ ಬೆಂಬಲಿಗರಿಗೂ ಸುಮಲತಾ ಪರ ನಿಲ್ಲುವಂತೆ ಮನವಿ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ.

ನನ್ನ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಎಲ್ಲ ರೀತಿಯ ಸಹಾಯ ಮತ್ತು ಸಹಕಾರ ಸಿಗುತ್ತದೆ. ಆದರೆ ನನಗೆ ಅಂಬರೀಶ್ ಅಭಿಮಾನಿಗಳೇ ಶ್ರೀರಕ್ಷೆ.

ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಎಲ್ಲವನ್ನು ತಿಳಿದೇ ನಾನು ಧುಮುಕಿದ್ದೇನೆ. ನಿಮ್ಮಂಥ ಹಿರಿಯರ ಮಾರ್ಗದರ್ಶನ ನನಗೆ ಅಗತ್ಯ ಎಂದು ಸುಮಲತಾ ಎಸ್‍ಎಂಕೆ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos