ಮಂಡ್ಯ, ಮೇ. 14, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯ ಲೆಕ್ಕಾಚಾರಗಳು ನಡೆದಿವೆ. ರಾಜ್ಯದ ಹೈವೋಲ್ಟೆಜ್ ಕಣವಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಫಲಿತಾಂಶದ ಬಗ್ಗೆ ಭಾರಿ ಕುತೂಹಲ ಮೂಡಿದೆ.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಗೆಲುವು ಸಾಧಿಸಲಿದ್ದಾರೆ ಎಂದು ದೇವರ ಹೂ ಭವಿಷ್ಯ ಹೇಳಿದ್ದಾರೆ. ಮೇ 23 ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
ಮತದಾನ ಮುಕ್ತಾಯವಾದ ನಂತರದಲ್ಲಿಯೂ ಮಂಡ್ಯ ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರಗಳು ನಡೆದಿವೆ. ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರ್ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವಿನ ಬಗ್ಗೆ ಲೆಕ್ಕಾಚಾರಗಳು, ಸಮೀಕ್ಷೆ, ವರದಿಗಳು ಭವಿಷ್ಯಗಳ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಹೊನ್ನಾದೇವಿ ಹೂವಿನ ಪ್ರಸಾದದ ಮೂಲಕ ಸುಮಲತಾ ಗೆಲುವಿನ ಬಗ್ಗೆ ಭವಿಷ್ಯ ಹೇಳಲಾಗಿದೆ.
ಸುಮಲತಾ ಗೆಲ್ಲುವುದಾದರೆ ಬಲಕ್ಕೆ ಹೂವು ಕೊಡಮ್ಮ ಎಂದು ದೇವಾಲಯದ ಅರ್ಚಕರು ಮನವಿ ಮಾಡಿದ್ದು, ದೇವರ ಮೂರ್ತಿಯ ಬಲ ಭಾಗದಿಂದ ಹೂ ಬಿದ್ದು, ಗೆಲುವಿನ ಸೂಚನೆ ನೀಡಿದೆ.