ತುರುವೇಕೆರೆ: ಪೋಷಕರು-ವಿದ್ಯಾರ್ಥಿಗಳ ಸಂಪರ್ಕದ ಕೊಂಡಿಯಾಗಿ ಶಿಕ್ಷಕರು ಕೆಲಸ ಮಾಡಿ ಮಕ್ಕಳ ಕಲಿಕೆಯಲ್ಲಿ ಸಕ್ರಿಯವಾಗುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ರಂಗಧಾಮಯ್ಯ ತಿಳಿಸಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಜಿಲ್ಲಾ ಹಾಗು ತಾಲ್ಲೂಕು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋವಿಡ್-೧೯ರ ಸಂದರ್ಭದಲ್ಲಿ ಪಟ್ಟಣ, ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತರಿಸುವುದು ಒಂದು ಸವಾಲಾಗಿದೆ. ಈಗ ಪಠ್ಯ ವಿಷಯ ಬೋಧಿಸುವುದಕ್ಕಿಂತ ಮೊದಲು ಮಕ್ಕಳಿಗೆ ಕನಿಷ್ಠವಾದರೂ ಮೂಲಭೂತ ಭಾಷಾ ಕಲಿಕೆ ಹಾಗು ಇನ್ನಿತರ ಕಲಿಕಾ ಸಾಮರ್ಥ್ಯಗಳನ್ನು ಕಲಿಸಲು ಆದಷ್ಟು ಒತ್ತು ನೀಡಿ ಎಂದು ಶಿಕ್ಷಕರುಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹಿಂದಿ, ಆಂಗ್ಲಭಾಷೆ, ಗಣಿತ, ವಿಜ್ಞಾನ, ಸಮಾಜ ವಿಷಯ ಶಿಕ್ಷಕರುಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಯಿತು.
ಬಿಆರ್ಸಿ ವಸಂತ್ಕುಮಾರ್, ಪ್ರಾಂಶುಪಾಲ ಪರಮೇಶ್ವರ್, ಕನ್ನಡ ಭಾಷಾ ಬೋಧಕರ ಸಂಘದ ತಾಲ್ಲೂಕು ಅಧ್ಯಕ್ಷ ಎಲ್.ಮಂಜೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಗುರುರಾಜು, ಶ್ರೀಕಾಂತ್, ಉಮಾಮಹೇಶ್, ಸಚೀಂದ್ರನ್, ಆದಿನಾರಾಯಣ್ ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.