ಧಾರವಾಡ, ಜ. 7 : ರೈಲು ಹಳಿಯಲ್ಲಿ ವಿದ್ಯಾರ್ಥಿ ಶವ ಪತ್ತೆಯಾದ ಘಟನೆ ಧಾರವಾಡ ನಗರದ ಬಾರಾಕೊಟ್ರಿ ಬಳಿಯ ಹಳಿಗಳ ಮೇಲೆ ನಡೆದಿದೆ.ಶ್ರೀಕರ ಮುತಾಲಿಕ್ ದೇಸಾಯಿ (21) ಮೃತಪಟ್ಟ ವಿದ್ಯಾರ್ಥಿ. ಶ್ರೀಕರ ಧಾರವಾಡ ಬಾರಾಕೊಟ್ರಿ ಬಳಿ ಪವನ ಶಾಲೆಯ ಎದುರಿನ ನಿವಾಸಿಯಾಗಿದ್ದಾನೆ. ಹುಬ್ಬಳ್ಳಿ ಜೈನ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ ಶ್ರೀಕರ, ಸೋಮವಾರ ಎರಡನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ಹೋಗಿದ್ದನು. ಪರೀಕ್ಷೆ ಬರೆಯಲು ಹೋದ ಶ್ರೀಕರ ಕಾಲೇಜಿನಿಂದ ಮನೆಗೆ ವಾಪಸ್ಸಾಗಿರಲಿಲ್ಲ.
ರಾತ್ರಿ ಶ್ರೀಕರ ಪೋಷಕರು ಆತನ ಮೊಬೈಲಿಗೆ ಹಲವು ಬಾರಿ ಕರೆ ಮಾಡಿದ್ದಾರೆ. ಈ ವೇಳೆ ಘಟನೆ ನಡೆದ ಸ್ಥಳದಲ್ಲಿ ಯುವಕನ ಮೊಬೈಲ್ ರಿಂಗ್ ಆಗುವುದನ್ನು ನೋಡಿದ ಸ್ಥಳೀಯರು ಕರೆ ಸ್ವೀಕರಿಸಿ ಮಾತಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಸೋಮವಾರ ರಾತ್ರಿ ಹುಬ್ಬಳ್ಳಿ ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಜಿಲ್ಲಾಸ್ಪತ್ರೆ ರವಾನೆ ಮಾಡಿದ್ದಾರೆ. ಶ್ರೀಕರ ಹಳಿ ಪಕ್ಕದಲ್ಲಿ ಕಾಲೇಜು ಬ್ಯಾಗ್ ಹಾಗೂ ಮೊಬೈಲ್ ಇಟ್ಟು ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.