ಹೊಸಕೋಟೆ, ಡಿ. 05: ರಾಜ್ಯದಲ್ಲಿ ಇಂದು 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಹೊಸಕೋಟೆಯಲ್ಲಿ ಮತಗಟ್ಟೆ ಒಳಗೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹಾಗೂ ಏಜೆಂಟ್ಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿ ಗ್ರಾಮದ ಮತಗಟ್ಟೆ 23ರಲ್ಲಿ ಏಜಂಟ್ಸ್ ಇರೋದನ್ನು ಎಂಟಿಬಿ ಪ್ರಶ್ನಿಸಿದಾಗ ಈ ಘಟನೆ ನಡೆದಿದೆ.
ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಬೆಂಡಿಗಾನಹಳ್ಳಿ ಗ್ರಾಮದ ಮತಗಟ್ಟೆ 23ಕ್ಕೆ ಎಂಟಿಬಿ ನಾಗರಾಜ್ ಭೇಟಿ ಕೊಟ್ಟರು. ಈ ವೇಳೆ ಅಲ್ಲಿ ಶರತ್ ಬಚ್ಚೇಗೌಡ ಪರ ಏಜೆಂಟ್ಸ್ ಇರೋದನ್ನು ಗಮನಿಸಿದ ನಾಗರಾಜ್, ಅವರನ್ನು ಹೊರಗೆ ಕಳಿಸಲು ಮುಂದಾದರು. ಆಗ ನೀವ್ಯಾರು ನಮ್ಮನ್ನು ಕೇಳೋಕೆ ಎಂದು ಪ್ರಶ್ನಿಸಿದ ಏಜಂಟ್ಸ್, ನಿಮ್ಮ ಐಡಿ ತೋರಿಸಿ ಎಂದು ಎಂಟಿಬಿ ನಾಗರಾಜ್ಗೆ ಮರು ಪ್ರಶ್ನಿಸಿದ್ದಾರೆ. ಇದಕ್ಕೆ ಕೆಂಡಾಮಂಡಲವಾದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್, ನೀವ್ಯಾರು ಕೇಳೋಕೆ? ಅಂತಾ ಪ್ರಶ್ನಿಸಿದ್ರು. ಆಗ ಏಜೆಂಟ್ಸ್ ಹಾಗೂ ಎಂಟಿಬಿ ನಾಗರಾಜ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಎಂಟಿಬಿ ನಾಗರಾಜ್ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲು ತೆರಳಿದ್ರು.