ವಿಶೇಷ ಉಪನ್ಯಾಸ ಕಾರ್ಯಕ್ರಮ

ವಿಶೇಷ ಉಪನ್ಯಾಸ ಕಾರ್ಯಕ್ರಮ

ಧಾರವಾಡ, ಜ. 28: ಮುರುಘಾಮಠದ ದಾಸೋಹ, ಸಾಹಿತ್ಯ ಸೇವೆ ನಾಡಿಗೆ ಮಾದರಿ. ಶ್ರೀ ಮಠಕ್ಕೆ ಬಂದು ಮೃತ್ಯುಂಜಯ ಹಾಗೂ ಮಹಾಂತಪ್ಪಗಳ ಆಶೀರ್ವಾದ ಪಡೆದುಕೊಂಡ ಭಕ್ತರಿಗೆಲ್ಲ ಒಳ್ಳೆಯದಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗ್ರಂಥಾಲಯ ವಿಜ್ಞಾನಿ ಡಾ. ಎಸ್.ಆರ್. ಗುಂಜಾಳ ಹೇಳಿದರು.

ನಗರದ ಮುರುಘಾಮಠದಲ್ಲಿ ಶ್ರೀ ಮದಥಣಿ ಮುರುಘೕಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ನೆನ್ನೆ ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದೇ ಮಠದಲ್ಲಿದ್ದು ಪ್ರಸಾದ ಸೇವಿಸಿ ಬೆಳೆದಿದ್ದೇನೆ. ಅದಕ್ಕಾಗಿ ಸಾಧನೆ, ಸೇವೆ ಮಾಡಲು ಸಾಧ್ಯವಾಯಿತು. ಇಲ್ಲಿ ಪಡೆದ ಬದುಕಿನ ಜ್ಞಾನ ಯಾವ ವಿಶ್ವವಿದ್ಯಾಲಯದಲ್ಲೂ ದೊರಕಿಲ್ಲ. ಮಠದ ಸಂಸ್ಕೃತಿ ಜೀವನದಲ್ಲಿ ಬದಲಾವಣೆ ತರುತ್ತದೆ. ಅಂಥ ಸಂಸ್ಕೃತಿಯನ್ನು ಅಳವಡಿಸಿಕೊಂಡ ಬಹಳಷ್ಟು ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಮಾತನಾಡಿ, ಅನುಭವ ಮಂಟಪದಲ್ಲಿ ಶರಣರು ರ್ಚಚಿಸುತ್ತಿದ್ದ ವಿಷಯಗಳು ದೈನಂದಿನ ಬದುಕಿನ ಬದಲಾವಣೆಗೆ ಹತ್ತಿರವಾಗಿರುತ್ತಿದ್ದವು. ಅನುಭಾವ ಎನ್ನುವುದು ಲೌಕಿಕ ಪ್ರಪಂಚದಲ್ಲಿ ಪ್ರಮುಖವಾಗಿದೆ. ಅನುಭಾವದ ಕುರಿತು ವಚನ ಸಾಹಿತ್ಯದಲ್ಲಿ ವಿಶಿಷ್ಟವಾಗಿ ಹೇಳಲಾಗಿದೆ ಎಂದರು.

ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಧಾರವಾಡ ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದೆ. ಅದೇರೀತಿ ಇಲ್ಲಿನ ಮುರುಘಾಮಠ ದಾಸೋಹ ಸೇವೆಯಲ್ಲಿ ಮಾದರಿಯಾಗಿದ್ದು, ಇಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧೆನೆಗೈದ ಡಾ. ಎಸ್.ಆರ್. ಗುಂಜಾಳ, ಸಾವಿತ್ರವ್ವ ಹೊಂಗಲ, ಅಶೋಕ ಅಂಗಡಿ ದಂಪತಿಯನ್ನು ಸನ್ಮಾನಿಸಲಾಯಿತು.

ಶಿರಹಟ್ಟಿ ಫಕೀರೇಶ್ವರ ಸಂಸ್ಥಾನಮಠದ ಶ್ರೀ ಜಗದ್ಗುರು ಫಕ್ಕೀರ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅವರಾದಿ ಫಲಹಾರೇಶ್ವರ ಸಂಸ್ಥಾನಮಠದ ಶ್ರೀ ಶಿವಮೂರ್ತಿ ಸ್ವಾಮೀಜಿ, ಸವಣೂರಿನ ಶ್ರೀ ಚನ್ನಬಸವ ಸ್ವಾಮೀಜಿ, ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮ್ಮನಹಳ್ಳಿ, ಇತರರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos