ಬೆಂಗಳೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 4 ಪ್ರಮುಖ ವ್ಯಕ್ತಿಗಳನ್ನು ‘ನಮ್ಮ ಬೆಂಗಳೂರು ಐಕಾನ್ಸ್(ರಾಯಭಾರಿ)” ಗಳಾಗಿ ನಿಯೋಜನೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ತಿಳಿಸಿದರು.
“ನಮ್ಮ ಬೆಂಗಳೂರು ಐಕಾನ್ಸ್” ಕಾರ್ಯಕ್ರಮಕ್ಕೆ ಇಂದು ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ನಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮತದಾನ ಮಾಡುವ ಸಲುವಾಗಿ ನಗರದ ಜನತೆಗೆ ಉಮ್ಮಸ್ಸು ತುಂಬಿಸುವ ಸಲುವಾಗಿ ಹಾಗೂ ಚುನಾವಣಾ ಹಬ್ಬಕ್ಕಾಗಿ ಈ 4 ಪ್ರಮುಖ ವ್ಯಕ್ತಿಗಳು ರಾಯಭಾರಿಗಳಾಗಿ ನಮ್ಮ ಜೊತೆ ಕೈಜೋಡಿಸಿ ನಾಗರೀಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಮೊದಲ ಬಾರಿ ಚುನಾವಣಾವಣೆಯಲ್ಲಿ ಮತ ಚಲಾಯಿಸುತ್ತಿರುವವರಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ತಪ್ಪದೆ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಮುಂದೆ ಬಂದು ಎಲ್ಲರಿಗೂ ಮತದಾಮ ಮಾಡಲು ಪ್ರೇರೇಪಿಸಿ ಮತದಾನ ಮಾಡಬೇಕೆಂದು ತಿಳಿಸಿದರು.
ಚುನಾವಣಾ ವ್ಯವಸ್ಥೆಯಲ್ಲಿ ನಾವು ಮತದಾನ ಮಾಡಿದರೆ ಏನೂ ಬದಲಾಗೋದಿಲ್ಲ ಎಂಬ ಮನೋಭಾವಿದ್ದರೆ ಅದನ್ನು ಮೊದಲು ತಲೆಯಿಂದ ತೆಗೆಯಿರಿ. ಜವಾಬ್ದಾರಿಯಿಂದ ಎಲ್ಲರೂ ಒಂದಾಗಿ ಮತದಾನ ಮಾಡಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಉತ್ತಮ ಸಮಾಜವನ್ನು ರೂಪಿಸಿ ಎಂದು ಪ್ರೇರೇಪಿಸಿದರು.
ಬೆಂಗಳೂರು ನಗರದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ “ನಮ್ಮ ಬೆಂಗಳೂರು ಐಕಾನ್ಸ್”ಗಳ ವಿವರಗಳು ಈ ಕೆಳಕಂಡಂತಿದೆ:
1.ರಮೇಶ್ ಅರವಿಂದ್, ಖ್ಯಾತ ಚಿತ್ರ ನಟ ಮತ್ತು ನಿರ್ದೇಶಕ.
2.ನೀತು ವನಜಾಕ್ಷಿ, ನಟಿ ಹಾಗೂ ರೂಪದರ್ಶಿ
3.ಅನುಪ್ ಶ್ರೀಧರ್, ಬ್ಯಾಡ್ಮಿಂಟನ್ ಆಟಗಾರ.
4.ಅರ್ಚನಾ ಜಿ ಕಾಮತ್, ಟೇಬಲ್ ಟೆನ್ನಿಸ್ ಆಟಗಾರ್ತಿ.
ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷಾದ ಕಾಂತರಾಜ್, ವಿಶೇಷ ಆಯುಕ್ತರಾದ ಸುರೋಲ್ಕರ್ ವಿಕಾಸ್ ಕಿಶೋರ್, ಸ್ವೀಪ್ ನೋಡಲ್ ಅಧಿಕಾರಿಯಾದ ಪ್ರತಿಭಾ, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.