ಚಾಮರಾಜನಗರ, ಡಿ . 17 : ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಸೊಸೆಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ತಾಲೂಕಿನ ದಿಂಡರವಾಡಿ ಗ್ರಾಮದ ಬೆಳ್ಳಮ್ಮ ದೊಡ್ಡಮ್ಮ, ರಮೇಶ್ ಶಿಕ್ಷೆಗೊಳಗಾದವರು.ಚಿಕ್ಕಮಾದುಶೆಟ್ಟಿ ಮತ್ತು ರಂಗಸ್ವಾಮಿ ಎಂಬುವರನ್ನು ದೋಷಮುಕ್ತರನ್ನಾಗಿಸಿದೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮಂಜುಳಾ ಎಂಬುವರನ್ನು 2006ರಲ್ಲಿ ದಿಂಡರವಾಡಿ ಗ್ರಾಮದ ಚಿಕ್ಕಮಾಧುಶೆಟ್ಟಿ ಅವರ ಪುತ್ರ ಮಹೇಶ್ ವಿವಾಹವಾಗಿದ್ದರು. ದಂಪತಿಗೆ ಆರು ವರ್ಷವಾದರೂ ಮಕ್ಕಳಾಗಿರಲಿಲ್ಲ. ಈ ವಿಚಾರವಾಗಿ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಅತ್ತೆ, ಮೈದುನ, ನಾದಿನಿ ಈಕೆಯೊಂದಿಗೆ 2013ರ ನ. 21 ರಂದು ಜಗಳವಾಡಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು.
ಸುಟ್ಟ ಗಾಯಗಳಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಂಜುಳಾ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಪೊಲೀಸರಿಗೆ ವೈಯಕ್ತಿಕವಾಗಿ ಹೇಳಿಕೆ ನೀಡಿದ್ದರು. ಈ ಬಗ್ಗೆ ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪಣೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಮೂವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.