ಹೈದರಾಬಾದ್, ನ. 13 : ಕುಡಿತದ ಚಟದಿಂದ ಬೇಸತ್ತು ಸ್ವತಃ ತಂದೆ-ತಾಯಿ ಮಗನನ್ನು ಜೀವಂತವಾಗಿ ಸುಟ್ಟಿರುವ ಭೀಕರ ಘಟನೆ ತೆಲಂಗಾಣದ ವಾರಂಗಲ್ನ ಗ್ರಾಮೀಣ ಜಿಲ್ಲೆಯಲ್ಲಿ ನಡೆದಿದೆ.
ವಾರಂಗಲ್ ಗ್ರಾಮೀಣ ಜಿಲ್ಲೆಯ ಮುಸ್ತಾಯಲಪಳ್ಳಿ ಗ್ರಾಮದ ಪ್ರಭಾಕರ್ ಹಾಗೂ ವಿಮಲಾ ಅವರು ತಮ್ಮ ಮಗನಾದ ಕೆ.ಮಹೇಶ ಚಂದ್ರ(42)ನನ್ನು ಕಂಬಕ್ಕೆ ಕಟ್ಟಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟಿದ್ದಾರೆ. ಮಹೇಶ್ ಕುಡಿತದ ಚಟಕ್ಕೆ ಒಳಗಾಗಿದ್ದ, ಯಾವಾಗಲೂ ಕುಡಿದು ಬಂದು ಕಿರುಕುಳ ನೀಡುತ್ತಿದ್ದನು. ಆತನ ಕಿರುಕುಳ ಸಹಿಸಲು ತಂದೆ, ತಾಯಿಗೆ ಸಾಧ್ಯವಾಗಿಲ್ಲ. ಮಹೇಶ್ ಕಾಟ ತಾಳಲಾರದೇ ಪತ್ನಿ ಎರಡು ತಿಂಗಳ ಹಿಂದೆಯೇ ತವರು ಮನೆಗೆ ಹೋಗಿದ್ದಳು. ಹಣಕ್ಕಾಗಿ ಕಿರುಕುಳ ನೀಡುವ ಮೂಲಕ ಜೀವ ಹಿಂಡುತ್ತಿದ್ದನು. ಗ್ರಾಮಸ್ಥರು ಸಹ ಈತನಿಗೆ ಹಲವು ಬಾರಿ ಹೊಡೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಬ್ಬರು ಮಕ್ಕಳ ತಂದೆಯಾಗಿರುವ ಮಹೇಶ್, ರಾತ್ರಿ ಕಂಠಪೂರ್ತಿ ಕುಡಿದು ಬಂದು ಹೆತ್ತವರನ್ನು ಹೊಡೆಯಲು ಬೇಸತ್ತಾದ ತಂದೆ-ತಾಯಿ ಹಚ್ಚಿದ ಬೆಂಕಿಯಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಪೊಲೀಸರು ದಮೆರಾದಿಂದ ಹಳ್ಳಿಗೆ ಧಾವಿಸಿದ್ದು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮಹೇಶ್ ಪೋಷಕರನ್ನು ಬಂಧಿಸಿದ್ದಾರೆ.