ಬೆಂಗಳೂರು, ಏ. 3, ನ್ಯೂಸ್ ಎಕ್ಸ್ ಪ್ರೆಸ್: ಈಗ ನಡೆಯುತ್ತಿರುವುದು ಒಕ್ಕಲಿಗರ ಸಂಘದ ಚುನಾವಣೆಯಲ್ಲ, ಬದಲಾಗಿ ಲೋಕಸಭಾ ಚುನಾವಣೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಎಸ್,ಎಂ ಕೃಷ್ಣ ಹೇಳಿದ್ದಾರೆ. ಬೆಂಗಳೂರು ವರದಿಗಾರರ ಕೂಟ ಮತ್ತು ಬೆಂಗಳೂರು ಪ್ರೆಸ್ ಕ್ಲಬ್ ಜಂಟಿಯಾಗಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲೋಕಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾನು ದೇವೇಗೌಡರ ಹಿಂದೆ ನಿಲ್ಲದೇ ಇರುವುದು ವಿಪರ್ಯಾಸ ಅಲ್ಲ ಎಂದು ಸ್ಪಷ್ಟಪಡಿಸಿದರು. ರಾಜೀವ್ ಗಾಂಧಿ ಇದ್ದಾಗ ಪೂರ್ಣ ಪ್ರಮಾಣದ ಸಹಕಾರ ಸಿಗುತ್ತಿತ್ತು. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಈಗ ಅಂತಹ ಬೆಳವಣಿಗೆ, ವಾತಾವರಣ ಇಲ್ಲ. ಹೀಗಾಗಿ ಪಕ್ಷ ತೊರೆದು ಬಂದೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು. ಯಾವ ಆಸೆ ಮತ್ತು ಅಧಿಕಾರದ ಗುರಿ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ. ರಾಜ್ಯದಲ್ಲೂ ವಂಶಪಾರಂಪರ್ಯ ರಾಜಕಾರಣ ನಡೆಯುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ತಾತ ಹಾಗೂ ಇಬ್ಬರು ಮೊಮ್ಮಕ್ಕಳು ಸ್ಪರ್ಧಿಸಿದ್ದಾರೆ. ಇದು ಸರಿಯಲ್ಲ. ನಾಳೆ ಮಂಡ್ಯದಲ್ಲಿ ಇದನ್ನು ಮತ್ತೆ ಹೇಳುತ್ತೇನೆ. ನಾನು ಎಂದೂ ಹಿಂಬಾಗಿಲ ರಾಜಕಾರಣ ಮಾಡಿಲ್ಲ. 132 ಕಾಂಗ್ರೆಸ್ ಶಾಸಕರನ್ನು ಹೆಗಲ ಮೇಲೆ ಇಟ್ಟುಕೊಂಡು ಮುಖ್ಯಮಂತ್ರಿ ಆಗಿದ್ದೆ. ಆದರೆ ಅಧಿಕಾರಕ್ಕಾಗಿ ಇದ್ದಕ್ಕಿದ್ದಂತೆ ಬಿಜೆಪಿಯವರ ಜತೆ ಕೈ ಜೋಡಿಸಿ ರಾತ್ರೋ ರಾತ್ರಿ ಮುಖ್ಯಮಂತ್ರಿ ಆದರಲ್ಲ, ಅವರದ್ದು ಹಿಂಬಾಗಿಲ ರಾಜಕಾರಣ ಎಂದು ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.