ಬೆಂಗಳೂರು, ಏ. 23, ನ್ಯೂಸ್ ಎಕ್ಸ್ ಪ್ರೆಸ್: ಸೀತಾಫಲ ಹಣ್ಣಸನ್ನು ನಿಯಮಿತವಾಗಿ ಸೇವಿಸುವುದರಿಂದ ಪಿತ್ತ ಮತ್ತು ವಾತ ಕಡಿಮೆಯಾಗುತ್ತದೆ. ಅತಿಯಾದ ದಾಹ ನಿವಾರಣೆಗೆ ಇದು ತುಂಬಾ ಒಳ್ಳೆಯದು. ದಾಹ ಹೆಚ್ಚಾದಾಗ ಸೀತಾಫಲದ ಹಣ್ಣಿನ ರಸಕ್ಕೆ ಸಕ್ಕರೆ ಸೇರಿಸಿ ಕುಡಿದರೆ ದಾಹ ನಿವಾರಣೆಯಾಗುತ್ತದೆ.
ದೇಹದಲ್ಲಿನ ಗಾಯಕ್ಕೆ ಇದು ಉತ್ತಮ ಮನೆ ಮದ್ದು. ಇದರ ಬೀಜವನ್ನು ತಣ್ಣೀರಿನಲ್ಲಿ ಅರೆದು ಬಟ್ಟೆಯಲ್ಲಿ ಹಾಕಿ ಕಟ್ಟಿದರೆ ಗಾಯ ಕ್ಷಣಮಾರ್ಧದಲ್ಲಿ ಕಡಿಮೆಯಾಗುತ್ತದೆ. ಇನ್ನೂ ಪ್ರತಿದಿನ ಸೀತಾಫಲ ಸೇವಿಸುತ್ತಿದ್ದರೆ ಹೃದಯದ ರಕ್ತ ಸಂಚಲನ ಚೆನ್ನಾಗಿ ಆಗಿ, ಹೃದಯದ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.
ಇದೊಂದು ಉತ್ತಮ ಭೇದಿ ನಿವಾರಕವೂ ಹೌದು. ಬಿಸಿಲಿನಲ್ಲಿ ಒಣಗಿಸಿದ ಸೀತಾಫಲದ ತಿರುಳನ್ನು ಪುಡಿ ಮಾಡಿಟ್ಟುಕೊಳ್ಳಬೇಕು. ಭೇದಿಯಾದಾಗ ಆ ಪುಡಿಯನ್ನು ತಣ್ಣೀರಿನಲ್ಲಿ ಕಲಸಿ ಸೇವಿಸಿದರೆ ಸಾಕು ಭೇದಿ ಕಡಿಮೆಯಾಗುತ್ತದೆ. ಜೊತೆಗೆ ಕುರುವಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೀತಾಫಲ ಗಿಡದ ಎಲೆ ಹೇಳಿ ಮಾಡಿಸಿದ ಮದ್ದು. ಈ ಎಲೆಗಳನ್ನು ಜಜ್ಜಿ ಕುರುವಿನ ಮೇಲೆ ಕಟ್ಟಬೇಕು. ಇದರಿಂದ ಕುರು ಬೇಗ ಗುಣವಾಗುತ್ತದೆ. ಹಣ್ಣಿನ ತಿರುಳನ್ನು ಉಪ್ಪಿನ ಜತೆ ಬೆರೆಸಿ ಲೇಪಿಸಿದರೆ ಕುರುಗಳು ಹಣ್ಣಾಗಿ ಬೇಗ ಒಡೆಯುತ್ತವೆ.
ಮುಖ್ಯವಾದ ವಿಚಾರವೆಂದರೆ ಗರ್ಭಪಾತದ ಅಪಾಯವನ್ನು ತಡೆಯುವ ಶಕ್ತಿ ಈ ಹಣ್ಣಿಗಿದೆ. ಗರ್ಭಿಣಿಯರು ಇದನ್ನು ಸೇವಿಸುವುದರಿಂದ ಗರ್ಭದಲ್ಲಿರುವ ಶಿಶುವಿನ ಮೆದುಳು ವಿಕಾಸವಾಗುತ್ತದೆ. ಅಷ್ಟೇ ಅಲ್ಲದೇ ಹೆರಿಗೆ ನಂತರ ತಾಯಂದಿರ ತೂಕ ಕಡಿಮೆಯಾಗುತ್ತದೆ. ಆದ್ದರಿಂದ ಆ ವೇಳೆಯಲ್ಲಿ ಇದರ ಸೇವನೆ ಒಳ್ಳೆಯದು.
ತಲೆಯಲ್ಲಿ ಹೇನು ನಿವಾರಣೆ ಮಾಡುವ ಶಕ್ತಿ ಸೀತಾಫಲಕ್ಕಿದೆ. ವಾರಕ್ಕೆ ಒಂದು ದಿನ ಸೀತಾಫಲದ ಬೀಜವನ್ನು ನೀರಲ್ಲಿ ಅರೆದು ತಲೆಗೆ ಲೇಪನ ಮಾಡಬೇಕು. ನಂತರ ಅರ್ಧ ಗಂಟೆ ನಂತರ ತಲೆ ಸ್ನಾನ ಮಾಡಿದರೆ ತಲೆಯಲ್ಲಿ ಹೇನು ಮಾಯವಾಗುತ್ತದೆ.
ದೇಹದ ತೂಕ ಹೆಚ್ಚಿಸಬೇಕು ಎಂದಿರುವವರು ಸೀತಾಫಲವನ್ನು ಸೇವಿಸಿದರೆ ಸಾಕು, ತೂಕ ಹೆಚ್ಚುತ್ತದೆ. ಸೀತಾಫಲವು ಬಾಯಿಯ ಆರೋಗ್ಯಕ್ಕೂ ಒಳ್ಳೆಯದು. ಈ ಹಣ್ಣಿನ ತಿರುಳು ಹಲ್ಲು ಮತ್ತು ದವಡೆ ನೋವಿನ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ.
ಸೀತಾಫಲದ ಎಲೆಗಳ ಕಷಾಯವನ್ನು ಮುಟ್ಟಿನ ಸಮಯದಲ್ಲಿ ಸೇವಿಸಿದರೆ ಮುಟ್ಟು ಸರಿಯಾಗಿ ಆಗುತ್ತದೆ.