ಕಲಬುರಗಿ, ಮೇ.11, ನ್ಯೂಸ್ ಎಕ್ಸ್ ಪ್ರೆಸ್: ನಾನು ಜೆಡಿಎಸ್ ಪಕ್ಷ ಬಿಡಲಿಲ್ಲ, ನನ್ನನ್ನು ದೇವೇಗೌಡ ಅವರು ಪಕ್ಷದಿಂದ ಉಚ್ಛಾಟನೆ ಮಾಡಿದ್ದರು ಎಂದು ಸಿದ್ದರಾಮಯ್ಯ, ತಮ್ಮನ್ನು ಪಕ್ಷಾಂತರಿ ಎಂದ ಬಿಜೆಪಿಯವರಿಗೆ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಉಮೇಶ್ ಜಾಧವ್ ಅವರನ್ನು ಸಿದ್ದರಾಮಯ್ಯ ಟೀಕಿಸಿದ್ದರು, ಇದಕ್ಕೆ ಪ್ರತಿಯಾಗಿ ಬಿಜೆಪಿಯ ಆರ್.ಅಶೋಕ್ ಅವರು ‘ಸಿದ್ದರಾಮಯ್ಯ ಸಹ ಜೆಡಿಎಸ್ ಬಿಟ್ಟವರೇ, ಅವರೂ ಪಕ್ಷಕ್ಕೆ ದ್ರೋಹ ಎಸಗಿದವರೇ’ ಎಂದಿದ್ದರು. ಇದಕ್ಕೆ ಈಗ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ನಾನು ಜೆಡಿಎಸ್ ಬಿಡಲಿಲ್ಲ, ನಾನು ಮಾಡುತ್ತಿದ್ದ ಅಹಿಂದ ಹೋರಾಟದಿಂದಾಗಿ ದೇವೇಗೌಡ ಅವರು ನನ್ನನ್ನು ಜೆಡಿಎಸ್ನಿಂದ ಉಚ್ಛಾಟನೆ ಮಾಡಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಆರ್.ಅಶೋಕ್ ವಿರುದ್ಧ ವಾಗ್ದಾಳಿಯನ್ನೂ ನಡೆಸಿದ ಸಿದ್ದರಾಮಯ್ಯ, ಅಶೋಕ್ ಅವರು ಸತ್ಯ ತಿಳಿದುಕೊಂಡು ಮಾತನಾಡಬೇಕು, ಆತನ ಮಾತಿಗೆ ಹಿಂದೂ ಇಲ್ಲ ಮುಂದೂ ಇಲ್ಲ ಎಂದು ವ್ಯಂಗ್ಯವಾಡಿದರು. ಮಾಜಿ ಬೆಂಬಲಿಗ ಉಮೇಶ್ ಜಾಧವ್ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ ಉಮೇಶ್ ಜಾಧವ್ ಅವರಿಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ನೀಡಿತ್ತು, ಆತನನ್ನು ಶಾಸಕನನ್ನಾಗಿ ಬೆಳಿಸಿತ್ತು, ಆದರೆ ಆತ ತನ್ನ ಲಾಭಕ್ಕಾಗಿ ಕಾಂಗ್ರೆಸ್ಗೆ ದ್ರೋಹ ಮಾಡಿದ ಆದರೆ ನಾನು ಆತನಂತೆ ಮಾಡಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಅಹಿಂದ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಸಿದ್ದರಾಮಯ್ಯ ಅವರನ್ನು ಅಹಿಂದ ಕೈಬಿಡುವಂತೆ ದೇವೇಗೌಡ ಅವರು ಒತ್ತಡ ಹೇರಿದ್ದರು, ಆದರೆ ಅದನ್ನು ಸಿದ್ದರಾಮಯ್ಯ ಮಾಡಲಿಲ್ಲ, ಆಗ ಸಿದ್ದರಾಮಯ್ಯ ಅವರನ್ನು ದೇವೇಗೌಡ ಅವರು ಪಕ್ಷದಿಂದ ಉಚ್ಛಾಟನೆ ಮಾಡಿದ್ದರು. ಆನಂತರ ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಯಾದರು.