ಬೆಂಗಳೂರು, ಜು. 3: 2019ರ ಲೋಕಸಭಾ ಚುನಾವಣೆಯ ಬಳಿಕ ರಾಜ್ಯದ ರಾಜಕಿಯದಲ್ಲಿ ಹಲವಾರು ಬದಲಾವಣೆ ನಡೆಯುತ್ತಿದೆ. ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆ. ಆದರೂ ತನಗೆ ಗೊತ್ತಿಲ್ಲ ಎಂದು ಪಕ್ಷದ ನಾಯಕರು ಓಡಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಟಾಂಗ್ ಕೊಟ್ಟಿದ್ದಾರೆ.
ಮೋದಿ ಮತ್ತೆ ಪ್ರಧಾನಿಯಾದ ಮೇಲೆ ಆಪರೇಷನ್ ಕಮಲ ನಿಂತಿದೆ. ಬಿಜೆಪಿ ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಮೈಸೂರಿನಲ್ಲಿ ಜಿ.ಟಿ. ದೇವೇಗೌಡ ಹೇಳಿದ್ದಾರೆ. ಈ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ಮುಂದಾಗಿರುವುದರ ಹಿಂದೆ ಬಿಜೆಪಿ ಕೈವಾಡವಿದೆ. ಬಿಜೆಪಿ ನಮ್ಮ ಶಾಸಕರಿಗೆ ಆಮಿಷವೊಡ್ಡಿ ಸೆಳೆಯುತ್ತಿದೆ. ಆದರೆ, ತನಗೇನೂ ಗೊತ್ತಿಲ್ಲದಂತೆ ವರ್ತಿಸುತ್ತಿದೆ ಎಂದು ಸಿದ್ಧರಾಮಯ್ಯ ಹೇಳಿದ್ದರು.
ಇದನ್ನು ಅಲ್ಲಗಳೆದ ದೋಸ್ತಿ ಪಕ್ಷದ ಸಚಿವ ಜಿ.ಟಿ. ದೇವೇಗೌಡ, ಬಿಜೆಪಿ ಆಪರೇಷನ್ ಕಮಲ ಮಾಡುತ್ತಿಲ್ಲ. ಹಿಂದೆ ಪ್ರಯತ್ನ ನಡೆಸಿರಬಹುದು. ಮೋದಿ ಮತ್ತೆ ಪ್ರಧಾನಿಯಾದ ಬಳಿಕ ಎಲ್ಲವೂ ನಿಂತಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ 5 ವರ್ಷ ಪೂರೈಸಲಿದ್ದಾರೆ. ದೇಶಕ್ಕೆ ಮೋದಿ ಪ್ರಧಾನಿಯಾಗಿರುವಂತೆ ರಾಜ್ಯಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರವಧಿ ಪೂರೈಸಲಿದ್ದಾರೆ ಎಂದು ಹೇಳಿದ್ದಾರೆ.