ಹುಳಿಯಾರು:ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ ಹುಳಿಯಾರಿನ ಸೀಲ್ಡೌನ್ ಪ್ರದೇಶಕ್ಕೆ ಹಾಲು, ಬಾಳೆಹಣ್ಣು, ತರಕಾರಿ ವಿತರಿಸುವ ಮೂಲಕ ಅವರ ಅಭಿಮಾನಿಗಳು ಅರ್ಥ ಪೂರ್ಣವಾಗಿ ಆಚರಿಸಿದರು.
ತಿಮ್ಲಾಪುರ ಗ್ರಾಪಂ ಮಾಜಿ ಅಧ್ಯಕ್ಷ ನಂದಿಹಳ್ಳಿ ದೇವರಾಜು ಅವರು ಈ ಸಂದರ್ಭದಲ್ಲಿ ಮಾತನಾಡಿ ಕೊರೊನಾ ಪತ್ತೆಯಾಗಿರುವ ಬೀದಿಯನ್ನು ತಾಲೂಕು ಆಡಳಿತ, ಪಟ್ಟಣ ಪಂಚಾಯ್ತಿ ಸೀಲ್ಡೌನ್ ಮಾಡಿ ಹೋದವರು ಮತ್ತೆ ಇತ್ತ ತಿರುಗಿಯೂ ಸಹ ನೋಡುವುದಿಲ್ಲ. ಪರಿಣಾಮ ಕುಡಿಯುವ ನೀರು ಸಹ ಸಿಗದೆ ಇಲ್ಲಿನ ನಿವಾಸಿಗಳು ಕಷ್ಟ ಅನುಭವಿಸುತ್ತಿದ್ದಾರೆ. ದುಡಿಯುವ ಕೈಗಳನ್ನು ಸೀಲ್ಡೌನ್ ನೆಪದಲ್ಲಿ ಕಟ್ಟಿಹಾಕಿದ್ದು ಇವರ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಇನ್ನಾದರೂ ಸೀಲ್ಡೌನ್ ಪ್ರದೇಶಕ್ಕೆ ನೀರು, ಆಹಾರ ಸಾಮಗ್ರಿಗಳನ್ನು ವಿತರಿಸಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.
ಸಿದ್ಧರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಕಳಂಕ ರಹಿತ ಆಡಳಿತ ನಡೆಸಿದ್ದಾರೆ. ಅನ್ನಭಾಗ್ಯ, ಸಾಲಮನ್ನ, ಶಾಧಿಭಾಗ್ಯ, ಕ್ಷೀರಭಾಗ್ಯ ಹೀಗೆ ಅನೇಕ ಭಾಗ್ಯಗಳನ್ನು ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಇಂತಹ ಜನಾನುರಾಗಿ ರಾಜಕಾರಣಿಗೆ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಲಿ, ಮತ್ತೊಷ್ಟು ಬಡವರ, ಕೃಷಿಕರ, ರೈತರರ ಪರ ಭಾಗ್ಯಗಳ ಸರಮಾಲೆಯನ್ನೇ ನೀಡಲಿ ಎಂದು ಆಶಿಸಿದರು.