ನವದೆಹಲಿ, ಮಾ.14, ನ್ಯೂಸ್ ಎಕ್ಸ್ ಪ್ರೆಸ್: ಐಪಿಎಲ್ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಕೇರಳ ಮೂಲದ ವೇಗಿ ಶ್ರೀಶಾಂತ್ರನ್ನು ಬಿಸಿಸಿಐ ಜೀವಾವಧಿ ನಿಷೇಧದ ಶಿಕ್ಷೆ ನೀಡಿತ್ತು. ಶ್ರೀಶಾಂತ್ ಜೀವನ ಪರ್ಯಂತ ಕ್ರಿಕಟ್ ಆಡುವಂತಿಲ್ಲ ಎಂದು ಆದೇಶಿಸಿತ್ತು.
ಈ ಸಂಬಂಧ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಶುಕ್ರವಾರ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಶ್ರೀಶಾಂತ್ ಮೇಲೆ ಹೇರಿದ್ದ ನಿಷೇದವನ್ನು ರದ್ದುಗೊಳಿಸಿದೆ. ಈ ಮೂಲಕ ಶ್ರೀಶಾಂತ್ ವೃತ್ತಿಜೀವನದ ಕಪ್ಪು ಚುಕ್ಕೆಯಿಂದ ಮುಕ್ತಿ ಪಡೆದಂತಾಗಿದೆ. ಆದರೆ ಶ್ರೀಶಾಂತ್ ಹಲವು ವರ್ಷಗಳಿಂದ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದು, ಮತ್ತೆ ಕ್ರಿಕೆಟ್ ಮರಳುವ ಸಾಧ್ಯತೆ ಕಡಿಮೆ.
ಶುಕ್ರವಾರ ಬೆಳಗ್ಗೆ ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್, ಬಿಸಿಸಿಐ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ತಿಳಿಸಿದೆ. ಈ ಹಿಂದೆ ಐಪಿಎಲ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪದ ಸುಳಿಯಲ್ಲಿ ಶ್ರೀಶಾಂತ್ ಸಿಕ್ಕಿಬಿದ್ದಿದ್ದರು. ಸಿಬಿಐ ತನಿಖೆಯಲ್ಲಿ ಶ್ರೀಶಾಂತ್ ಹೆಸರು ಆಚೆ ಬಂದಿತ್ತು. ಆದರೆ ಶ್ರೀಶಾಂತ್ ತಾವು ನಿರ್ದೋಷಿ ಎಂದು ಸಮರ್ಥಿಸಿಕೊಂಡಿದ್ದರು.