ರಾಮನಗರ, ಡಿ.1 : ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ನಿತ್ಯಾನಂದ ಸ್ವಾಮೀಜಿಯನ್ನು ಹುಡುಕಿ ಗುಜರಾತ್ ರಾಜ್ಯ ಪೊಲೀಸರು ಬಿಡದಿಯ ಧ್ಯಾನಪೀಠ ಆಶ್ರಮದಲ್ಲಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಗುಜರಾತ್ ಹೈಕೋರ್ಟ್ ಕೆಲ ದಿನಗಳ ಹಿಂದಷ್ಟೇ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆ ಹಿನ್ನೆಲೆಯಲ್ಲಿ ನಿತ್ಯಾನಂದನ ವಿರುದ್ಧ ಸರ್ಚ್ ವಾರೆಂಟ್ ಹೊರಡಿಸಿದ್ದು, ಅವರೊಂದಿಗೆ ಪೊಲೀಸರು ಆಶ್ರಮ ಪ್ರವೇಶಿಸಿ, ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಶೋಧ ಕಾರ್ಯದ ವೇಳೆ ನಿತ್ಯಾನಂದನ ಸುಳಿವು ಪತ್ತೆಯಾಗಿಲ್ಲ. ನಿತ್ಯಾನಂದನನ್ನು ಹುಡುಕಿ ರಾಜ್ಯ ಸಿಐಡಿ ಪೊಲೀಸರೂ ಕೂಡ ಕಳೆದ ವಾರ ಆಶ್ರಮಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ವರ್ಷಗಳಿಂದಲೂ ನಿತ್ಯಾನಂದ ಬಿಡದಿ ಆಶ್ರಮದಲ್ಲಿಲ್ಲ. ಆತ ದೇಶದಲ್ಲಿಯೇ ಇಲ್ಲ. ರಾಮನಗರದ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆಗೂ ಹಾಜರಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.