ಶಾಲಾ ಬಸ್ ಡಿಕ್ಕಿ, ಸ್ಥಳದಲ್ಲೇ ಸಾವು

ಶಾಲಾ ಬಸ್ ಡಿಕ್ಕಿ, ಸ್ಥಳದಲ್ಲೇ ಸಾವು

ಬೆಂಗಳೂರು, ನ. 1: ಮೊಮ್ಮಗನ ಮದುವೆ ಆಮಂತ್ರಣ ಪತ್ರಿಕೆ ಕೊಡಲು ನಡೆದು ಹೋಗುತ್ತಿದ್ದ ಪಾದಚಾರಿಗೆ ಶಾಲಾ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಶವಂತಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಮೃತರನ್ನು ನಂದಿನಿ ಲೇಔಟ್ ನಿವಾಸಿ ಚಿಕ್ಕೋಡಿಯಪ್ಪ ಎಂದು ಗುರುತಿಸಲಾಗಿದೆ. ಸಂಬಂಧಿಕರು ಸ್ನೇಹಿತರನ್ನು ಮದುವೆಗೆ ಆಹ್ವಾನಿಸುವ ಸಲುವಾಗಿ ನೆಲಮಂಗಲಕ್ಕೆ ಹೋಗಬೇಕಾಗಿತ್ತು. ಆದಕಾರಣ ಬೆಳಗ್ಗೆ 7.15 ಸುಮಾರಿನಲ್ಲಿ ಮನೆಯಿಂದ ಆಮಂತ್ರಣ ಪತ್ರಿಕೆಗಳೊಂದಿಗೆ ಬಸ್ ನಿಲ್ದಾಣಕ್ಕೆ ನಡೆದುಹೋಗುತ್ತಿದ್ದರು.

ಯಶವಂತಪುರ ಸರ್ಕಲ್ ಬಳಿ ರಸ್ತೆ ದಾಟಲು ಚಿಕ್ಕೋಡಿಯಪ್ಪ ಮುಂದಾಗುತ್ತಿದ್ದಂತೆ ವೇಗವಾಗಿ ಬಂದ ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹದ ಪಕ್ಕ ಚೆಲ್ಲಪಿಲ್ಲಿಯಾಗಿದ್ದ ಆಮಂತ್ರಣ ಪತ್ರಿಕೆಗಳನ್ನು ಕಂಡು ದಾರಿಹೋಕರು ಮರುಗಿದರು. ಮದುವೆ ಮನೆಯಲ್ಲೀಗ ಶೋಕದ ವಾತಾವರಣ ನಿರ್ಮಾಣವಾಗಿದೆ. ಸಂಭ್ರಮದಲ್ಲಿ ನೆಂಟರು, ಸ್ನೇಹಿತರನ್ನು ಮದುವೆಗೆ ಆಹ್ವಾನಿಸಲು ತೆರಳಿದ್ದ ಚಿಕ್ಕೋಡಿಯಪ್ಪ ಶವವಾಗಿ ಮನೆ ಸೇರಿರುವುದು ವಿಷಾದಕರ.

ಯಶವಂತಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos