ಮಂಡ್ಯ, ಏ. 18, ನ್ಯೂಸ್ ಎಕ್ಸ್ ಪ್ರೆಸ್: ನಟಿ ಸುಮಲತಾ ಅಂಡ್ ಟೀಮಿನ ಟೂರಿಂಗ್ ಟಾಕೀಸ್ ಟೆಂಟ್ ಮಂಡ್ಯದಿಂದ ಇಂದು ಸಂಜೆಯೇ ಖಾಲಿಯಾಗಲಿದೆ ಎಂದು ಜೆಡಿಎಸ್ ಮುಖಂಡ ಹಾಲಿ ಸಂಸದ ಶಿವರಾಮೇಗೌಡ ಮತ್ತೊಮ್ಮೆ ತಮ್ಮ ನಾಲಗೆಯನ್ನು ಹರಿಬಿಟ್ಟಿದ್ದಾರೆ. ನಾಗಮಂಗಲದಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು. ನಟಿ ಸುಮಲತಾ ಹಾಗೂ ನಟರಾದ ದರ್ಶನ್, ಯಶ್ ಕುರಿತು ಪರೋಕ್ಷ ದಾಳಿ ನಡೆಸಿರುವ ಅವರು, ಇಂದು ಸಂಜೆಯೇ ಟೂರಿಂಗ್ ಟಾಕೀಸ್ ಟೆಂಟ್ ಮಂಡ್ಯದಿಂದ ಖಾಲಿಯಾಗಲಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಹೀನಾಯವಾಗಿ ಸೋಲಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ ಮೈತ್ರಿ ಅಭ್ಯರ್ಥಿ ನಿಖಿಲ್ ಸುಮಾರು 3 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಚುನಾವಣಾ ಪ್ರಚಾರ ರಂಗೇರಿದ ದಿನದಿಂದ ನಟಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಅವರ ಪರವಾಗಿ ಪ್ರಚಾರನಿರತ ಸಿನಿಮಾ ನಟರಾದ ದರ್ಶನ್ ಹಾಗೂ ಯಶ್ ವಿರುದ್ಧ ಒಂದಲ್ಲಾ ಒಂದು ಬಗೆಯಲ್ಲಿ ಕಿಡಿಕಾರುತ್ತಿರುವ ಹಾಲಿ ಸಂಸದ ಶಿವರಾಮೇಗೌಡ ಮತದಾನದ ದಿನವಾದ ಇಂದೂ ಸಹ ತಮ್ಮ ದಾಳಿ ಮುಂದುವರೆಸಿದ್ಧಾರೆ. ಸುಮಲತಾ ವಿರುದ್ಧ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.