ಬೆಂಗಳೂರು, ಮೇ.8, ನ್ಯೂಸ್ ಎಕ್ಸ್ ಪ್ರೆಸ್: ಮರಳು ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿ ಯಿಂದ ಗ್ರಾಹಕರನ್ನು ಮುಕ್ತಗೊಳಿಸಲು ‘ಸ್ಯಾಂಡ್ ಬಜಾರ್’ ಎಂಬ ಹೊಸ ಮರಳು ಆಪ್ ವೊಂದನ್ನು ಸಿದ್ಧಪಡಿಸಿದ್ದಾರೆ. ದಕ್ಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಖರೀದಿಸುವ ವೇಳೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವುದರಿಂದ ‘ಸ್ಯಾಂಡ್ ಬಜಾರ್’ ಆಯಪ್ ಅನ್ನು ಬಿಡುಗಡೆಗೊಳಿಸಲಾಗಿದ್ದು, ಫ್ರಮ್ ಶೋರ್ ಟು ಎವ್ರಿ ಡೋರ್’ ಎನ್ನುವ ಘೋಷಣೆಯೊಂದಿಗೆ ‘ಸ್ಯಾಂಡ್ ಬಜಾರ್’ ಆಯಪ್ ನಲ್ಲಿ ಬುಕ್ಕಿಂಗ್ ಮಾಡಿದ ಮರಳು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಯೋಚನೆಯನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಶಿಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ‘ಸ್ಯಾಂಡ್ ಬಜಾರ್’ ಆಯಪ್ ಮೂಲಕ ಮರಳು ಖರೀದಿಸಲು ಬಯಸುವ ಗ್ರಾಹಕರು ಮೊದಲು ಆಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು, ಅದರಲ್ಲಿ ಸಂಪೂರ್ಣ ವಿಳಾಸ, ಮರಳು ಪೂರೈಕೆ ಮಾಡಬೇಕಾದ ಸ್ಥಳ, ಆಧಾರ್ ನಂಬರ್, ನಂತರ ಓಟಿಪಿ ಸಂಖ್ಯೆ ನಮೂದಿಸಿದರೆ ಮರಳಿನ ದರ ಕುರಿತಾದ ಮಾಹಿತಿ ದೊರಕುತ್ತದೆ. ಗ್ರಾಹಕರು ಆನ್ ಲೈನ್ನಲ್ಲೇ ಹಣ ಪಾವತಿ ಮಾಡಿ ಮರಳು ಖರೀದಿಸಬಹುದಾಗಿದೆ. ಈ ಆಯಪ್ ಮೂಲಕ ಮರಳು ಸಾಗಾಟ ಸುಲಭವಾಗಿ ನಡೆಯಲಿದ್ದು, ಗ್ರಾಹಕರಿಗೆ ಅನುಕೂಲಕರವಾಗಲಿದೆ ಎನ್ನಲಾಗಿದೆ.