ದೇವನಹಳ್ಳಿ, ಅ. 25: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಬೆಳೆದ ತರಕಾರಿ ನೋಡುಗರ ಕಣ್ಮನ ಸೆಳೆಯುತ್ತಿದೆ. ವಿದ್ಯುತ್ ಸಂಪರ್ಕವೇ ಇಲ್ಲದೆ ಬೆಳಗುವ ಬೀದಿ ದೀಪಗಳು, ಕುಕ್ಕುಟ ಉದ್ಯಮ ಕುರಿತ ಸಮಗ್ರ ಮಾಹಿತಿ, ನಿಖರ, ಖುಷ್ಕಿ, ಸಾವಯವ ಬೇಸಾಯಗಳ ಕುರಿತ ಅರಿವು. ಹೀಗೆ ಹಲವು ವಿಶೇಷತೆ ಮತ್ತು ಮಾಹಿತಿಯ ಕಣಜವಾಗಿದೆ ಈ ಬಾರಿಯ ಕೃಷಿ ಮೇಳ.
ಕೈದಿಗಳ ಕೃಷಿ ಪ್ರೇಮ
ದೇವನಹಳ್ಳಿಯ ಬಯಲು ಕಾರಾಗೃಹದಲ್ಲಿರುವ 112 ಎಕರೆ ಜಮೀನಲ್ಲಿ ಜೀವಾವಧಿ ಶಿಕ್ಷೆಗೆ ಗುರಿ ಯಾಗಿರುವ 40 ಕ್ಕೂ ಹೆಚ್ಚಿನ ಕೈದಿಗಳು ವಿವಿಧ ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಖೈದಿಗಳೇ ಬೆಳೆದ ತರಕಾರಿ, ಹಣ್ಣುಗಳು ಕೇಂದ್ರ ಕಾರಾಗೃಹ, ಚಿಕ್ಕಬಳ್ಳಾಪುರ ಕಾರಾಗೃಹಗಳಿಗೆ ಸರಬರಾಜಾಗುತ್ತಿವೆ. ಪರಿವರ್ತನ ಪ್ರಾಡಕ್ಟ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಮಾಸಿಕ 1 ಲಕ್ಷ ರೂ. ಆದಾಯ ಬರುತ್ತಿದ್ದು, ಸರ್ಕಾರಕ್ಕೆ ನೀಡಲಾಗುತ್ತಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗುವ ಕೈದಿಗಳ ಸನ್ನಡತೆ ಆಧಾರದಲ್ಲಿ ಬೇಗ ಬಿಡುಗಡೆಯನ್ನು ಮಾಡಲಾಗುತ್ತದೆ.
ಸೋಲಾರ್ ಗಾರ್ಡನ್ ಲೈಟ್
ಟಪೆಟಮ್ ಇಂಡಿಯಾ ಸೋಲಾರ್ ಸಂಸ್ಥೆಯು ತಂತಿಗಳು, ಸ್ವಿಚ್ ಗಳ ಸಂಪರ್ಕವಿಲ್ಲದೆ ಬೆಳಗಬಹುದಾದ ಗಾರ್ಡನ್ ಲೈಟ್ ಅಭಿವೃದ್ಧಿಪಡಿಸಿದೆ. ಕಾರುಗಳಿಗೆ ಎಮರ್ಜೆನ್ಸಿ ಲೈಟ್, ಸ್ಪಾಟ್ ಲೈಟ್ಗಳು ಮೇಳದಲ್ಲಿವೆ.
ಕೃಷಿ ಪದ್ಧತಿಗಳ ಅರಿವು
ಮೇಳದಲ್ಲಿ ಪ್ರಮುಖವಾಗಿ ನಿಖರ, ಖುಷ್ಕಿ, ಸಾವಯವ ಬೇಸಾಯ ಸೇರಿ ಇನ್ನಿತರ ಕೃಷಿ ಪದ್ಧತಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುತ್ತಿದೆ. ನೀರು ಶೇಖರಣೆ ಮಾಡುವುದು, ಸಂರಕ್ಷಿತ ಬೇಸಾಯ ಮತ್ತು ಜಲಕೃಷಿಯಿಂದ ಬೆಳೆಯುವ ವಿಧಾನಗಳನ್ನು ತಿಳಿಸಲಾಗುತ್ತಿದೆ.
ಹನಿ ನೀರಾವರಿ ಪದ್ದತಿ
ಹನಿ ನೀರಾವರಿ ಮೂಲಕ ರಾಗಿ, ಜೋಳ, ಭತ್ತ ಬೆಳೆಯುವ ಪರಿ, ಬಂಜರು ಭೂಮಿಯಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಬಳಸಿ ಬೆಳೆಯುವ ವಿಧಾನಗಳನ್ನು ರೈತರಿಗೆ ತಿಳಿಸಿಕೊಡಲಾಗುತ್ತಿದೆ. ಅನಾವೃಷ್ಟಿ ಮತ್ತು ಅತಿವೃಷ್ಟಿಯಂತಹ ಹವಮಾನ ವೈಪರಿತ್ಯದ ಸಂದರ್ಭದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದನ್ನು ತಿಳಿಸಲಾಗುತ್ತಿದೆ.
ನೇರ ಗ್ರಾಹಕರಿಗೆ ಮಾರಾಟ
ಸಾಫ್ಟ್ ವೇರ್ ಕಂಪನಿಗಳ ಕೆಲಸ ಮಾಡುವ ಟೆಕ್ಕಿಗಳ ಸಮೂಹ ವೊಂದು ಟ್ರಾವರ್ಸ್ ಬಾಸ್ಕೆಟ್, ಬಯಕೆಗಳ ಬುಟ್ಟಿ’ ಎಂಬ ಆನ್ ಲೈನ್ ಸ್ಟಾರ್ಟ್ಅಪ್ ಪ್ರಾರಂಭಿಸಲಾಗಿದ್ದು, ರೈತರಿಂದ ಉತ್ಪನ್ನಗಳನ್ನು ಖರೀದಿ ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.
ಸಸ್ಯ ಜನ್ಯ ಇಂಧನ
ಡೀಸೆಲ್ ಮತ್ತು ಪೆಟ್ರೋಲ್ಗೆ ಪರ್ಯಾಯವಾಗಿ ಆವಿಷ್ಕರಿಸಲಾಗಿರುವ ಜೈವಿಕ ಮತ್ತು ನವೀಕರಣ ಇಂಧನವನ್ನು ಮೇಳದಲ್ಲಿ ಪ್ರದರ್ಶಿಸಲಾಗಿದೆ. ಕೃಷಿ ವಿವಿಯಲ್ಲಿ ಅಭಿವೃದ್ಧಿಪಡಿಸಲಾಗಿರುವ ಇಂಧನ ಸಿದ್ಧಪಡಿಸುವ ವಿಧಾನ ಮತ್ತು ಅದರ ಬಳಕೆ ಕುರಿತಂತೆ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ.