ಹಾಸನ, ಅ. 15: ಮಂಗಳೂರಿನಿಂದ ಬೆಂಗಳೂರಿಗೆ ಚಲಿಸುತ್ತಿದ್ದಾಗ ಇಂದು ಮಧ್ಯಾಹ್ನ 12 ಗಂಟೆಗೆ ಪಟ್ಟಣದ ಬೆಸ್ಕಾಂ ಕಚೇರಿ ಬಳಿ ಟ್ಯಾಂಕರಿನ ಮುಖ್ಯ ವಾಲ್ವ್ ನ ಬೋಲ್ಟ್ ತುಂಡಾದ ಪರಿಣಾಮ ಭಾರಿ ಪ್ರಮಾಣದ ಅನಿಲ ಸೋರಿಕೆಯಾಗಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ತಂಡ ಸತತವಾಗಿ ನೀರನ್ನು ಹಾಯಿಸಿ ಟ್ಯಾಂಕರ್ ಸ್ಫೋಟಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿಕೊಂಡಿದ್ದರು.
ಪಟ್ಟಣದ ಕುಶಾಲನಗರ, ಚಂಪಕನಗರ, ಮಲ್ಲಿಕಾರ್ಜುನ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮನೆಗಳಲ್ಲಿ ಒಲೆ ಹಚ್ಚದಂತೆ, ಗ್ಯಾಸ್ ಉರಿಸದಂತೆ, ಲೈಟ್ ಸ್ವಿಚ್ ಹಾಕದಂತೆ, ಬೆಂಕಿ ಕಿಡಿ ಬಳಸದಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ. ಜೊತೆಗೆ ಸಕಲೇಶಪುರ ಬಸ್ ನಿಲ್ದಾಣ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ.