ನವದೆಹಲಿ: ಸಿಖ್ ವಿರೋಧಿ ದಂಗೆಯ ಪ್ರಮುಖ ಆರೋಪಿ, ಸದ್ಯ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಜ್ಜನ್ ಕುಮಾರ್ ಶರಣಾಗತಿಯಾಗಲು ಕಾಲಾವಕಾಶ ಬೇಕೆಂಬ ಅರ್ಜಿಯನ್ನು ದೆಹಲಿ ಹೈ ಕೋರ್ಟ್ ಇಂದು ವಜಾಗೊಳಿಸಿದೆ.
ಸಜ್ಜನ್ ಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿತ್ತು. ಈ ಕುರಿತು ಕಾನೂನು ಹೋರಾಟ ನಡೆಸುತ್ತಿರುವ ಸಜ್ಜನ್, ಶರಣಾಗತಿಗೆ 30 ದಿನಗಳ ಕಾಲಾವಕಾಶಬೇಕೆಂದು ಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು. ಆದರೆ ಕೋರಿಕೆಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ ಎನ್ನಲಾಗಿದೆ.
ನ್ಯಾಯಾಧೀಶರಾದ ಎಸ್. ಮುರುಳಿಧರ ಹಾಗೂ ವಿನೋದ್ ಗೊಯೆಲ್ ಅವರಿದ್ದ ಪೀಠ ಸಜ್ಜನ್ರ ಕೋರಿಕೆಗೆ ಅವಕಾಶ ನೀಡಲಾಗದು ಎಂದಿದ್ದಾರೆ. ಡಿಸೆಂಬರ್ 17ರಂದು ಈ ಇಬ್ಬರೂ ನ್ಯಾಯಮೂರ್ತಿಗಳ ಪೀಠ ಸಜ್ಜನ್ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಈಗ ಸಜ್ಜನ್ರ ಅರ್ಜಿ ತಿರಸ್ಕೃತಗೊಂಡಿರುವುದರಿಂದ, ಶೀಘ್ರದಲ್ಲಿಯೇ ಸಜ್ಜನ್ ರನ್ನು ಬಂಧಿಸುವ ಸಾಧ್ಯತೆ ಇದೆ.