ಧಾರವಾಡ: ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ
ಕಳೆದ ಎರಡು ದಿನಗಳಿಂದ ಗಲಾಟೆ ನಡೆಯುತ್ತಲೇ ಇದೆ. ಸಮಾರೋಪದ ವೇದಿಕೆಗೆ ನುಗ್ಗಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮೈಕ್, ಕುರ್ಚಿಗಳನ್ನು ಕಿತ್ತೆಸೆದು ಗಲಾಟೆ ನಡೆಸಿದ ಘಟನೆಯು ರವಿವಾರ ಸಂಜೆ ನಡೆದಿದೆ.
ಹಿರಿಯ ಲೇಖಕ ಕೃಷ್ಣಮೂರ್ತಿ ಹನೂರು ಮಾತನಾಡುತ್ತಿರುವಾಗ ಏಕಾಏಕಿ ಸಭಾಂಗಣಕ್ಕೆ ನುಗ್ಗಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಶರಣು ಅಂಗಡಿ, ಜೊತೆಗೆ ನಾಲ್ವರು ವೇದಿಕೆಯನ್ನು
ಹತ್ತಿ ಮೈಕ್ ಕಿತ್ತುಕೊಂಡರು. ಓರ್ವ ಕುರ್ಚಿಯನ್ನು ಎತ್ತಿ ವೇದಿಕೆಯ ಹಿಂದಿನ ಪರದೆಯತ್ತ ಎಸೆದರೆ, ಇನ್ನೋರ್ವ ಟಿಪಾಯಿಯನ್ನು ಎತ್ತಿ ಕೆಳಕ್ಕೆಸೆದನು.
ಈ ವೇಳೆ ವೇದಿಕೆಯಲ್ಲಿ ಆಸೀನರಾಗಿದ್ದ ಗಣ್ಯರು ಸ್ವಲ್ಪದರಲ್ಲೇ ಬಚಾವಾಗಿದ್ದಾರೆ. ಮುಂದುವರಿದ ದುಷ್ಕರ್ಮಿಗಳು
ಪೋಡಿಯಂ ಅನ್ನು ನೆಲಕ್ಕುರುಳಿಸಿ ಗೂಂಡಾವೃತ್ತಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ವೇದಿಕೆಯೇರಿದ ನಾಲ್ವರನ್ನು ವಶಕ್ಕೆ ಪಡೆದು ಕರೆದೊಯ್ದರು. ಸೈನಿಕರ ಕುರಿತು ಚಿಂತಕ ಡಾ.ಶಿವ ವಿಶ್ವನಾಥನ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಈ ದಾಂಧಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.