ಬೆಂಗಳೂರು, ಏ. 3, ನ್ಯೂಸ್ ಎಕ್ಸ್ ಪ್ರೆಸ್: ಇತ್ತೀಚಿನ ದಿನಗಳಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಹೆಚ್ಚಾಗಿವೆ. ಅದ್ರಲ್ಲೂ ಮಹಿಳಾ ಸಬ್ ಇನ್ಸ್ ಪಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಕಳೆದ ಮಾರ್ಚ್ 31 ರ ರಾತ್ರಿ ಎಸ್ಐ ಸವಿನಯ ಹಾಗೂ ಪೇದೆ ರಾಹುಲ್ ಪತ್ತಾರ್ ಗುಸ್ತು ತಿರುಗುತ್ತಿದ್ದರು. ಈ ವೇಳೆ ಜಯನಗರದ 9 ನೇ ಬ್ಲಾಕ್ ನಲ್ಲಿ ಮಳಿಗೆಯೊಂದರ ಮುಂದೆ ಯುವಕರು ಸಿಗರೇಟ್ ಸೇದುತ್ತಾ ಗಲಾಟೆ ಮಾಡಿಕೊಳ್ತಿದ್ರು. ಸ್ಥಳಕ್ಕೆ ಬಂದ ಎಸ್ಐ, ಯುವಕರಿಗೆ ಯಾಕೆ ಗಲಾಟೆ ಮಾಡ್ತಿದ್ದೀರಾ, ಮನೆಗೆ ಹೊರಡಿ ಅಂತಾ ಹೇಳಿದ್ದಾರೆ. ಆಗ ಯುವಕರು ಎಸ್ಐಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆಗ ಎಸ್ಐ ಯುವಕರ ಹೆಸರು ಕೇಳಿದ್ರೆ, ಹೇಳದೆ ಅನುಮಾನ ಬರುವಂತೆ ನಡೆದುಕೊಂಡಿದ್ದಾರೆ. ಹೀಗಾಗಿ ಅವರನ್ನು ಪೇದೆ ಪೊಲೀಸ್ ಠಾಣೆಗೆ ಕರೆದೊಯ್ಯಲು ಮುಂದಾದಾಗ ಅವರ ಸಮವಸ್ತ್ರ ಹಿಡಿದು ಜಗ್ಗಿದ್ದಾರೆ, ಅಲ್ಲದೆ ಪೇದೆ ನೆರವಿಗೆ ಬಂದ ಎಸ್ಐ ಮೇಲೂ ಹಲ್ಲೆ ಮಾಡಿ ಎಳೆದಾಡಿದ್ದಾರೆ. ತಕ್ಷಣವೇ ಎಸ್ಐ ಹೊಯ್ಸಳ ವಾಹನವನ್ನು ಕರೆಸಿಕೊಂಡು ನಾಗಭೂಷಣ್ ಮತ್ತು ಅನೂಪ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.