ಚಿಕ್ಕಬಳ್ಳಾಪುರ, ಜು. 3: ಖಾಸಗಿ ಬಸ್ ಮತ್ತು ಟಾಟಾ ಏಸ್ ವಾಹಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ 11 ಮಂದಿ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಬಳಿ ನಡೆದಿದೆ.
ಬುಧವಾರ ಮಧ್ಯಾಹ್ನ 12.20 ವೇಳೆಗೆ ಮುರುಗಮಲ್ಲದಿಂದ ಚಿಂತಾಮಣಿ ಕಡೆ ಬರುತ್ತಿದ್ದ ಖಾಸಗಿ ಬಸ್ ಮತ್ತು ಚಿಂತಾಮಣಿಯಿಂದ ಮುರುಗಮಲ್ಲ ಕಡೆ ಹೋಗುತ್ತಿದ್ದ ಟಾಟಾ ಏಸ್ ವಾಹನ ಡಿಕ್ಕಿಯಾಗಿದ್ದು ಸ್ಥಳದಲ್ಲೇ 11 ಮಂದಿ ಸಾವನ್ನಪ್ಪಿದ್ದು, ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರೆಲ್ಲ ಟಾಟಾ ಏಸ್ನಲ್ಲಿದ್ದ ಪ್ರಯಾಣಿಕರು ಎನ್ನುವ ಮಾಹಿತಿ ಲಭ್ಯವಾಗಿದೆ. ಘಟನೆಗೆ ಖಾಸಗಿ ಬಸ್ ಚಾಲಕನ ಅತಿ ವೇಗವೇ ಕಾರಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಮುರುಗಮಲ್ಲ ಧಾರ್ಮಿಕ ಕ್ಷೇತ್ರವಾದ ಹಿನ್ನೆಲೆಯಲ್ಲಿ ಪ್ರತಿ ದಿನ ಭಾರೀ ಸಂಖ್ಯೆಯಲ್ಲಿ ಜನ ಬರುತ್ತಿರುತ್ತಾರೆ.
ಈ ಸಂಬಂಧ ಚಿಂತಾಮಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಗಾಯಳುಗಳನ್ನು ಹತ್ತಿರದ ಚಿಂತಾಮಣಿ ಮತ್ತು ಕೋಲಾರ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.