ಬೆಂಗಳೂರು, ಜು 16 : ರೆಸಾರ್ಟ್ ವಾಸ್ತವ್ಯದಲ್ಲಿ ವಾರ ಕಳೆದಿರುವ ಜೆಡಿಎಸ್ ಶಾಸಕರಿಗೆ ಬೇಸರ ಕಾಡಲಾರಂಭಿಸಿದ್ದು, ಕಾಲಹರಣ ಹೇಗೆಂಬ ಚಿಂತೆ ಕಾಡಲಾರಂಭಿಸಿದೆ.
ನಂದಿ ಗಿರಿಧಾಮ ಬಳಿಕ ರೆಸಾರ್ಟ್ನಲ್ಲಿ ಆಹ್ಲಾದಕರ ವಾತಾವರಣ ಜೆಡಿಎಸ್ ಶಾಸಕರಿಗೆ ಆರಂಭದಲ್ಲಿ ಹಿತವಾಗಿತ್ತಾದರೂ, ದೀರ್ಘಾವಧಿ ವಾಸ್ತವ್ಯ ಬೇಸರ ತರುತ್ತಿದೆ. ಹೋಟೆಲ್ ಊಟ ರುಚಿಸುತ್ತಿಲ್ಲ. ಜನರ ಮಧ್ಯೆ ಬ್ಯುಸಿಯಾಗಿ ಓಡಾಡಿಕೊಂಡಿದ್ದ ಶಾಸಕರಿಗೆ ಏಕಾಂತ ಒಗ್ಗುತ್ತಿಲ್ಲ.
ರಾಜಕೀಯ ಅನಿಶ್ಚಿತತೆಯಿಂದ ಮೈತ್ರಿ ಸರಕಾರ ಉಳಿಸಿಕೊಳ್ಳಲು ಕಳೆದ ಸೋಮವಾರ ಜೆಡಿಎಸ್ ತನ್ನ ಶಾಸಕರನ್ನು ರೆಸಾರ್ಟ್ಗೆ ಸ್ಥಳಾಂತರಿಸಿತ್ತು. ವಿಶ್ರಾಂತಿ ಬಯಸಿದ್ದ ಶಾಸಕರು ಯೋಗ, ವ್ಯಾಯಾಮ, ಈಜು, ಹರಟೆ ಮೂಲಕ ಖುಷಿಯಾಗಿದ್ದರಾದರೂ ದಿನಗಳು ಕಳೆದಂತೆ ಕೂಡಿಹಾಕಿದ ಅನುಭವ ಕಾಡಲಾರಂಭಿಸಿದೆ. ಶಾಸಕರು ಬಯಸಿದಂತೆ ಮುದ್ದೆ ಊಟ ಮತ್ತಿತರ ವ್ಯವಸ್ಥೆ ಮಾಡಿದ್ದರೂ ಕ್ಷೇತ್ರದ ಒಡನಾಟ ಹಾಗೂ ಕುಟುಂಬದ ಜತೆ ಕಾಲಕಳೆಯಬೇಕೆಂಬ ಹಂಬಲ ಹೆಚ್ಚುತ್ತಿದೆ ಎಂದು ಶಾಸಕರೊಬ್ಬರು ಹೇಳಿಕೊಂಡರು.