ಅತ್ಯಾಚಾರ ಸಂತ್ರಸ್ತರಿಗೆ ಅವಹೇಳನ: ರಮೇಶ್‍ ಕುಮಾರ್ ಕ್ಷಮೆಗೆ ಜೆಎಂಎಸ್‍ ಆಗ್ರಹ

ಅತ್ಯಾಚಾರ ಸಂತ್ರಸ್ತರಿಗೆ ಅವಹೇಳನ: ರಮೇಶ್‍ ಕುಮಾರ್ ಕ್ಷಮೆಗೆ ಜೆಎಂಎಸ್‍ ಆಗ್ರಹ

ಬೆಂಗಳೂರು: ನಿನ್ನೆ ವಿಧಾನಸಭೆಯಲ್ಲಿ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು “ಆಪರೆಷನ್ ಕಮಲ” ಆಡಿಯೋ
ಬಗ್ಗೆ ಪ್ರಸ್ತಾಪಿಸುತ್ತಾ ತಮ್ಮ ಅಸಹಾಯಕತೆಯನ್ನು ವಿವರಿಸಲು ಅತ್ಯಾಚಾರದ ಸಂತ್ರಸ್ತೆಗೆ ತಮ್ಮನ್ನು
ಹೋಲಿಸಿಕೊಂಡು ಅತ್ಯಂತ ಹಗುರವಾಗಿ ಮಾತುಗಳನ್ನು ಆಡಿದ್ದಾರೆ. ಇದನ್ನು ಅಖಿಲ ಭಾರತ ಜನವಾದಿ ಮಹಿಳಾ
ಸಂಘಟನೆ ತೀರ್ವವಾಗಿ ಖಂಡಿಸಿದೆ.

ಈ ಸಮಯದಲ್ಲಿ ಸದನದಲ್ಲಿ
ಮಾಜಿ, ಹಾಲಿ ಮುಖ್ಯಮಂತ್ರಿಗಳು, ಆಡಳಿತ-ವಿರೋಧ ಪಕ್ಷಗಳ ಶಾಸಕರು, ಮಹಿಳಾ ಶಾಸಕರು ಹಾಜರಿದ್ದರು. ಅಷ್ಟೇ
ಅಲ್ಲದೆ ಅತ್ಯಾಚಾರ ಸಂತ್ರಸ್ತರಿಗೆ ಅವಹೇಳನ ಮಾಡುವ, ಕನಿಷ್ಟ ಲಿಂಗ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳದ
ಲಘು ಮಾತುಗಳನ್ನು ಹಾಸ್ಯವೆಂಬಂತೆ ಪರಿಗಣಿಸಿ ನಗುತ್ತಿದ್ದುದು ಅವರ ಲಿಂಗಸೂಕ್ಷ್ಮವಿಲ್ಲದ ಮನಃಸ್ಥಿತಿಯ
ದ್ಯೋತಕವಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ಬೇಸರ ವ್ಯಕ್ತಪಡಿಸಿದೆ.

ಸದನದ ಸದಸ್ಯರ ಈ ನಡೆಯೂ ಖಂಡನೀಯವಾಗಿದೆ. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಇದನ್ನು ಬಲವಾಗಿ ಖಂಡಿಸುತ್ತದೆ. ಅತ್ಯಾಚಾರದಂಥಹ ಬರ್ಭರ ಕೃತ್ಯವನ್ನು ಮತ್ತು ಅದಕ್ಕೆ ಒಳಗಾದ ಮಹಿಳೆಯರು ಎದುರಿಸುವ ಸಂಕಟ ಅವಮಾನದ ಕ್ಷಣಗಳನ್ನು ನಗೆಚಾಟಿಕೆ ಮಾಡಿ ಆಡಿಕೊಂಡು ನಕ್ಕ ಈ ಸದನದ ಸದಸ್ಯರು ಯಾವುದಾದರೂ ಅತ್ಯಾಚಾರದ ಸಂತ್ರಸ್ತೆಯ ಬಗ್ಗೆ ಕಾಳಜಿ, ಅಂತಃಕರಣ ತೋರಿಸಬಲ್ಲರೇ? ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆತಂಕ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಅತ್ಯಾಚಾರ ಸಂತ್ರಸ್ತರು ನ್ಯಾಯದ ಬಾಗಿಲಲ್ಲಿ ವರ್ಷಾನುಗಟ್ಟಲೆ ಕಾದು ನಿಲ್ಲುವ ಸ್ಥಿತಿ ಇದ್ದು, ಈ ಕೂಡಲೇ ಸಭಾಧ್ಯಕ್ಷರು  ಮತ್ತು ಸದನದ ಸದಸ್ಯರು ತಮ್ಮ  ಹೇಳಿಕೆಗೆ ಕ್ಷಮೆ ಯಾಚಿಸಬೇಕು. ಮುಂದೆಂದೂ ಹೀಗಾಗದಂತೆ ಎಚ್ಚರ ವಹಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಂಘಟನೆಯ ರಾಜ್ಯ ಪ್ರದಾನ ಕಾರ್ಯದರ್ಶಿ ಗೌರಮ್ಮ, ಕೆ.ಎಸ್‍.ವಿಮಲಾ ಆಗ್ರಹಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos