ಮಳೆಯ ಕಣ್ಣ ಮುಚ್ಚಾಲೆಗೆ ರೈತರು ಕಂಗಾಲು

ಮಳೆಯ ಕಣ್ಣ ಮುಚ್ಚಾಲೆಗೆ ರೈತರು ಕಂಗಾಲು

ದೇವನಹಳ್ಳಿ, ಜು.11 : ಜಿಲ್ಲಾಧ್ಯಂತ ಮುಂಗಾರು ಮಳೆ ಆಶಾದಾಯಕವಾಗಿ ಬರುತ್ತದೆ ಎಂಬ ರೈತರ ನಿರೀಕ್ಷೆ ಹುಸಿ ಆಗಿದೆ. ಬಿತ್ತನೆ ಮಾಡುವ ಸಮಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿರುವುದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ.

ಜಿಲ್ಲೆಯಲ್ಲಿ ಇತ್ತೀಚಿಗೆ ಬಿದ್ದ ಮಳೆಯಿಂದ ರೈತಾಪಿ ಜನರು ಸಂತಸದಿಂದಲೇ ಬಿತ್ತನೆಗೆ ಸಜ್ಜುಗೊಂಡು ಒಂದೆರಡು ಬಾರಿ ಭೂಮಿಯನ್ನು ಹದ ಮಾಡಿಕೊಂಡಿದ್ದರು ಆದರೆ ಕಳೆದ ವಾರದಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ವಾಗಿದ್ದರೂ ಮಳೆಯ ದರ್ಶನವಿಲ್ಲ. ಬಿತ್ತನೆ ಕಾರ್ಯಕ್ಕೆ ಸಜ್ಜಾಗಿರುವ ರೈತರು ಆಕಾಶದತ್ತ ಜಾತಕ ಪಕ್ಷಿಯಂತೆ ಎದುರು ನೋಡುವ ಪರಿಸ್ಥಿತಿ ಬಂದಿದೆ. ಈಗ ಮಳೆಯ ವಿಳಂಬದಿಂದ ಬಿತ್ತನೆ ಕಾರ್ಯ ಸ್ಥಗಿತ ಗೊಂಡಿದೆ. ಒಂದೆರಡು ಬಾರಿ ಸುರಿದ ಮಳೆ ಹೊರತು ಪಡಿಸಿದರೆ ಆಷಾಡ ಮಾಸದ ಗಾಳಿ ಜೊತೆಗೆ ಬಿಸಿಲಿನ ತಾಪ ಹಾಗೂ ಬೇಸಿಗೆ ನೆನಪಿಸುವಂತೆ ಆಗಿದೆ.

ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಒಟ್ಟು ಬಿತ್ತನೆ ಗುರಿ ಖುಷ್ಕಿ ಮತ್ತು ನೀರಾವರಿ 60,403 ಹೆಕ್ಟೇರ್ ಈ ಪೈಕಿ ನೀರಾವರಿ 450 ಹೆಕ್ಟೇರ್ ಮತ್ತು ಖುಷ್ಕಿ 307 ಹೆಕ್ಟೇರ್ ಒಟ್ಟು 757 ಹೆಕ್ಟೇರ್ ನಲ್ಲಿ ವಿವಿಧ ಬೆಳೆ  ಬಿತ್ತನೆ ಆಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 17,867 ಹೆಕ್ಟೇರ್ ಬಿತ್ತನೆ ಆಗಿ ಶೇ.33% ಇತ್ತು. ಪ್ರಸ್ತುತ ಶೇ.10% ರಷ್ಟು ಮಾತ್ರ ಆಗಿದೆ. ರಾಗಿ 65 ಹೆಕ್ಟೇರ್, ಮುಸುಕಿನ ಜೋಳ 317 ಹೆಕ್ಟೇರ್, ಮೇವಿನ ಜೋಳ 178 ಹೆ ಹೆಕ್ಟೇರ್, ತೊಗರಿ 158 ಹೆಕ್ಟೇರ್, ಅಳಸಂದಿ 15 ಹೆಕ್ಟೇರ್, ಅವರೆ 10 ಹೆಕ್ಟೇರ್, ನೆಲ ಗಡಲೆ 12 ಹೆಕ್ಟೇರ್ ಬಿತ್ತನೆ ಆಗಿದೆ.

ತಾಲೂಕುವಾರು ಬಿತ್ತನೆ ಕಾರ್ಯ ಆಗಿರುವುದು: ದೇವನಹಳ್ಳಿ 116 , ಹೊಸಕೋಟೆ 132 ಹೆಕ್ಟೇರ್, ದೊಡ್ಡಬಳ್ಳಾಪುರ 444 ಹೆಕ್ಟೇರ್, ನೆಲಮಂಗಲ 115 ಹೆಕ್ಟೇರ್ ನಲ್ಲಿ ಮಾತ್ರ ಬಿತ್ತನೆ ಆಗಿದೆ.

ಮಳೆಯ ವಿವರ : ಪ್ರಸ್ತುತ ಮುಂಗಾರಿನಲ್ಲಿ ಜೂಲೈ 05 ರವರೆಗೆ ಸುರಿದ ಮಳೆಯ ಪ್ರಮಾಣ ದೇವನಹಳ್ಳಿ ವಾಡಿಕೆ ಮಳೆ 106 ಮಿ.ಮೀ ಪೈಕಿ  74 ಮಿ.ಮೀ , ಹೊಸಕೋಟೆ 109 ಮಿ.ಮೀ ಪೈಕಿ 67 ಮಿ.ಮೀ, ದೊಡ್ಡಬಳ್ಳಾಪುರ 140 ಮಿ.ಮೀ ಪೈಕಿ 66 ಮಿ.ಮೀ, ನೆಲಮಂಗಲ 130 ಮಿ.ಮೀ ಪೈಕಿ 83 ಮಿ.ಮೀ ಮಾತ್ರ ಸುರಿದಿದ್ದು ಶೇಕಡ ವಾರು ಪ್ರಮಾಣದಲ್ಲಿ ಕೊರೆತೆ ಇದೆ.

ಮೇ. ಅಂತ್ಯ ಹಾಗೂ ಜೂನ್ ಪ್ರಾರಂಭದಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆ ಯಾದರೂ ಬಿತ್ತನೆ ಕಾರ್ಯ ಚುರುಕು ಆಗುತ್ತಿದ್ದಂತೆ ಮಳೆರಾಯ ಮೋಡದ ಮರೆಯಲ್ಲಿ ಸರಿದು ಮಳೆಯ ಕೊರತೆ ಉಂಟಾಯಿತು. ಈಗಾಗಲೇ ಬರದ ಛಾಯೆಯಲ್ಲಿ ಜಿಲ್ಲೆಯ ತಾಲೂಕುಗಳು ಇದ್ದು, ಕೆರೆ ಕುಂಟೆಗಳಲ್ಲಿ ನೀರು ಇಲ್ಲದಾಗಿದ್ದು, ನೀರಿಗೆ ಅಭಾವವಿದೆ. ಕೃಷಿ ಇಲಾಖೆಯಿಂದ ಬಿತ್ತನೆ ಬೀಜ , ಅಗತ್ಯ ಗೊಬ್ಬರ , ಲಘು ಪೌಷ್ಠಿಕಾಂಶ ಗೊಬ್ಬರ ಕೊರೆತೆ ಆಗದಂತೆ ದಾಸ್ತಾನು ಮಾಡಲಾಗಿದೆ. ಬೀಜ , ಗೊಬ್ಬರವನ್ನು ಸಿದ್ದತೆ ಮಾಡಿಕೊಮಡು ಮಳೆಗಾಗಿ ರೈತರು ಕಾಯುತ್ತಿದ್ದಾರೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ ಪೈರು ಬೆಳೆದಿತ್ತು . ರಾಗಿ ಪೈರು ಇನ್ನೇನು ತೆನೆ ಮೂಡುವ ಸಂದರ್ಭದಲ್ಲಿ ಮಳೆಯು ಕೈ ಕೊಟ್ಟಿತ್ತು ಇದೇ ಆತಂಕ ಈಗಲೂ ಕಾಡುತ್ತಿದೆ ಎಂದು ರೈತರು ಹೇಳುತ್ತಾರೆ.

ಈ ವರ್ಷ ಪ್ರಾರಂಭದಲ್ಲಿ ಉತ್ತಮ ಮಳೆ ಆದರೂ ಬಿತ್ತನೆ ಕಾರ್ಯ ಮುಗಿದ ನಂತರ ಕೈ ಕೊಟ್ಟಿರುವುದು ತಾಲೂಕಿನ ರೈತರಲ್ಲಿ ಆತಂಕ ಮೂಡಿಸಿದೆ. ಜಾನು ವಾರುಗಳಿಗೆ ಮೇವಿನ ಕೊರತೆ ಎದುರಾಗಲಿದೆ. ಎಚ್ ಎಮ್ ರವಿಕುಮಾರ್ ಕೃಷಿಕ ಸಮಾಜದ ನಿರ್ದೇಶಕ

 

ಆಷಾಡ ಇರುವುದರಿಂದ ಗಾಳಿ ಇದೆ. ಗಾಳಿ ಕಡಿಮೆ ಆಗಿ ಮಳೆ ಬಂದರೆ ಮತ್ತೊಂದು ಬಾರಿ ಉಳಿಮೆ ಮಾಡಿ ಬಿತ್ತನೆ ಕಾರ್ಯಕ್ಕೆ ಮುಂದಾಗ ಬಹುದು. ಕಳೆದ 2 ವರ್ಷ ದಿಂದ ಮಳೆ ಕ್ಷೀಣಿಸುತ್ತಿದೆ. ಎಲ್ಲಿಯೂ ಮಳೆ ಇಲ್ಲವಾದರಿಂದ ಬಿತ್ತನೆ ಗೆ ರೈತರು ಹಿಂದೇಟು ಹಾಕು ತ್ತಿದ್ದಾರೆ. ವಿವಿಧ ರೀತಿಯ ರೋಗಗಳನ್ನು ತಡೆಗಟ್ಟಿ ಆರೋಗ್ಯ ಸುಧಾರಿಸಿಕೊಳ್ಳಲು ರಾಗಿ, ದಾನ್ಯಗಳು ಅತಿ ಮುಖ್ಯಯವಾಗಿದೆ.

ನಾರಾಯಣಸ್ವಾಮಿ ರೈತ

ಜುಲೈ ತಿಂಗಳಿನಲ್ಲಿ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ ಮುಂಜಾಗ್ರತ ಕ್ರಮವಾಗಿ  ಬಿತ್ತನೆ ಬೀಜ, ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ.

ಗಿರೀಶ್ ಜಂಟಿ ಕೃಷಿ ನಿರ್ದೇಶಕ

ಈಗಾಗಲೇ ಜಿಲ್ಲೆಯ 4 ತಾಲೂಕುಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜವನ್ನು ರೈತರಿಗೆ ನೀಡುವ ಸಲುವಾಗಿ ಕಾಯ್ದಿರಿಸಲಾಗಿದೆ. ರಸ ಗೊಬ್ಬರದ ಕೊರತೆ ಇಲ್ಲದಂತೆ ಹೆಚ್ಚಿನ ಒತ್ತನ್ನು ನೀಡಲಾಗಿದೆ.

ಎಮ್ ಸಿ ವಿನುತಾ ಜಿಲ್ಲಾ ಕೃಷಿ ಇಲಾಖೆ ಉಪ ನಿರ್ದೇಶಕಿ

ಕೆಲ ರೈತರು ಬಿತ್ತನೆ ಬೀಜವನ್ನು ಖರೀದಿಸಿದ್ದಾರೆ. ಕೆಲವರು ಮಳೆಗಾಗಿ ಕಾಯುತ್ತಿದ್ದಾರೆ. ಮಳೆ ಬಂದರೆ ಬಿತ್ತನೆ ಕಾರ್ಯ ಚುರುಕು ಗೊಳ್ಳಲಿದೆ. ಜು. ತಿಂಗಳಲ್ಲಿ ಮಳೆ ಬರದಿದ್ದರೆ 3 ತಿಂಗಳ ಬೆಳೆಗಳಾದ ರಾಗಿ, ಹುರುಳಿ ಮಾತ್ರ ಬೆಳೆಯಬಹುದು.

 

ಫ್ರೆಶ್ ನ್ಯೂಸ್

Latest Posts

Featured Videos