ನವದೆಹಲಿ, ಮಾ.6, ನ್ಯೂಸ್ ಎಕ್ಸ್ ಪ್ರೆಸ್: ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು.
ರಫೇಲ್ ಒಪ್ಪಂದದ ದಾಖಲೆಗಳು ಕಳ್ಳತನವಾಗಿವೆ. ಅದನ್ನು ತೋರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಗೆ ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ.
ಫ್ರಾನ್ಸ್ನೊಂದಿಗಿನ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದು, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಪ್ರಶಾಂತ್ ಭೂಷಣ್, ಎಂಎಲ್ ಶರ್ಮಾ, ಮಾಜಿ ಸಚಿವರಾದ ಯಶವಂತ ಸಿನ್ಹಾ ಮತ್ತು ಅರುಣ್ ಶೌರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸರ್ಕಾರದ ಪರವಾಗಿ ತೀರ್ಪು ನೀಡಿತ್ತು.
ಈ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಪ್ರಶಾಂತ್ ಭೂಷಣ್ ಸೇರಿ ಅನೇಕರು ತೀರ್ಪಿನ ಮರು ವಿಚಾರಣೆಗೆ ಕೋರಿದ್ದರು. ಅಷ್ಟೇ ಅಲ್ಲ ಮುಕ್ತ ನ್ಯಾಯಾಲಯ ವಿಚಾರಣೆ ನಡೆಸುವಂತೆ ಅರ್ಜಿದಾರರು ಮನವಿ ಮಾಡಿದ್ದರು.
ಫೆ.26ರಂದು ಈ ವಿಚಾರಣೆ ನಡೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಮಾ.6ಕ್ಕೆ ನ್ಯಾಯಾಲಯ ಮುಂದೂಡಿತ್ತು. ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ.
“ಇಂಗ್ಲಿಷ್ ದಿನ ಪತ್ರಿಕೆ ಹಿಂದು, ರಫೆಲ್ ಕಡತಗಳನ್ನು ಕಳ್ಳತನ ಮಾಡಿದೆ. ಹಾಗಾಗಿ ಅವುಗಳನ್ನು ಕೋರ್ಟ್ನ ಮುಂದಿಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಲು ಸಿದ್ಧತೆ ನಡೆಸಿದೆ” ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ಹೇಳಿಕೊಂಡಿತು. “ದಾಖಲೆಗಳು ಕಳುವಾದ ನಂತರ ಯಾವ ಕ್ರಮ ಕೈಗೊಂಡಿದ್ದೀರಿ,” ಎಂದು ಸುಪ್ರೀಂ ಕೇಂದ್ರಕ್ಕೆ ಪ್ರಶ್ನಿಸಿದೆ.
36 ರಫೇಲ್ ಯುದ್ಧವಿಮಾನ ಖರೀದಿ ವಿಚಾರದಲ್ಲಿ ಕೇಂದ್ರ ಸರಿಯಾದ ಕ್ರಮ ಅನುಸರಿಸಿದೆ. ಎಲ್ಲ ರಕ್ಷಣಾ ಒಪ್ಪಂದಗಳನ್ನು ವಿಮರ್ಶೆ ಮಾಡುತ್ತಾ ಕೂರಲು ಸಾಧ್ಯವಿಲ್ಲ. ರಫೇಲ್ ಒಪ್ಪಂದದಲ್ಲಿ ಯಾವುದೇ ಸಂದೇಹ ಬೇಡ. ಜತೆಗೆ ವಿಮಾನ ಖರೀದಿಯ ಮೊತ್ತ ತಿಳಿಯುವುದೂ ಬೇಡ. ಈ ಒಪ್ಪಂದದಿಂದ ವಾಣಿಜ್ಯವಾಗಿ ಲಾಭವಿದೆ ಎನ್ನುವ ವಿಚಾರದಲ್ಲಿ ಹುರುಳಿಲ್ಲ. ಈ ಒಪ್ಪಂದದಲ್ಲಿ ನಾವು ಮಧ್ಯ ಪ್ರವೇಶಿಸುವ ಮಾತೇ ಇಲ್ಲ,” ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ತೀರ್ಪು ನೀಡಿದ್ದರು.