ಬೆಂಗಳೂರು: ಬೆಂಗಳೂರಿನ ಕುಂದಲಹಳ್ಳಿಯ ಫುಡ್ಪ್ರಿಯರ ಅಚ್ಚುಮೆಚ್ಚಿನ ತಾಣ ರಾಮೇಶ್ವರಂ ಕೆಫೆಯಲ್ಲಿ IED ಬಾಂಬ್ ಸ್ಫೋಟಿಸಿದ್ದಾರೆ. ಸ್ಥಳದಲ್ಲಿ ಬ್ಯಾಟರಿ, ನಟ್ಗಳು ಪತ್ತೆಯಾಗಿದೆ. ಈ ಘಟನೆ ರಾಜ್ಯ ರಾಜಧಾನಿ ಬೆಂಗಳೂರನ್ನು ಅಕ್ಷರಶಃ ದಂಗಾಗಿಸಿದೆ. ಸದ್ಯ ಈ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರತಿಕ್ರಿಯೆ ನೀಡಿದ್ದಾರೆ.
ಬ್ರಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ, ಬಾಂಬ್ ಬೆಂಗಳೂರು ಎಂಬ ಕಳಂಕ ತರಬೇಡಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಜನ ಸಾಮಾನ್ಯರ ಎದೆ ನಡುಗಿಸಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ದಿನೇ ದಿನೇ ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆಗೆ ಮತ್ತೊಂದು ನಿದರ್ಶನವಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಅವರು ಪದೇ ಪದೇ ಅನುಸರಿಸುತ್ತಿರುವ ತುಷ್ಟ್ರೀಕರಣ, ಓಲೈಕೆ ರಾಜಕಾರಣದ ಫಲವಾಗಿ ಇಂದು ಭಯೋತ್ಪಾದಕರಿಗೆ, ದೇಶದ್ರೋಹಿಗಳಿಗೆ, ಸಮಾಜ ಘಾತುಕ ಶಕ್ತಿಗಳಿಗೆ ರೆಕ್ಕೆ ಪುಕ್ಕ ಬಂದು ಕಾನೂನಿನ ಭಯ ಇಲ್ಲದಂತಾಗಿದ್ದು ಪೊಲೀಸರ ನೈತಿಕ ಸ್ಥೆರ್ಯಕ್ಕೆ, ಗುಪ್ತಚರ ಇಲಾಖೆಯ ಕಾರ್ಯದಕ್ಷತೆಗೆ ಧಕ್ಕೆ ತಂದಿದೆ ಎಂದು ಕಿಡಿಕಾರಿದ್ದಾರೆ.
ಇಂದಿನ ಬಾಂಬ್ ಬ್ಲಾಸ್ಟ್ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ತನಿಖೆಯನ್ನ NIAಗೆ ಒಪ್ಪಿಸಬೇಕು. ಕಾಂಗ್ರೆಸ್ ಸರ್ಕಾರ ಇನ್ನು ಮುಂದಾದರೂ ಕರ್ನಾಟಕದ ಜನತೆಗೆ, ಬೆಂಗಳೂರಿಗೆ ಶಾಂತಿ ಸುರಕ್ಷತೆಯ ಗ್ಯಾರಂಟಿ ನೀಡುವ ಗಮನಹರಿಸಬೇಕು ಎಂದಿದ್ದಾರೆ.