ಬೆಂಗಳೂರು, ಡಿ. 22 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಹೋಗಿ ಮಾಡುವಂಥದ್ದು ಏನೂ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಶಾಂತಿ ನೆಲೆಸಿದೆ. ಶಾಂತಿ ನೆಲೆಸಲು ಕಾಂಗ್ರೆಸ್ ನಾಯಕರು ಬಿಡಲಿ, ಯು ಟಿ ಖಾದರ್ ಹೇಳಿಕೆಯಿಂದಲೇ ಮಂಗಳೂರಿನಲ್ಲಿ ಇಷ್ಟೆಲ್ಲ ಸಮಸ್ಯೆ ಆಗಿದೆ. ಪ್ರತಿಭಟನೆಗೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ಕಿಡಿಕಾರಿದರು.
ಇವತ್ತು ದೆಹಲಿಗೆ ಹೋಗ್ತೇನೆ ಅಂದಿದ್ದ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸದ್ಯ ಪೌರತ್ವ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಈಗ ನಮ್ಮ ವರಿಷ್ಠರಿಗೆ ಬಿಡುವು ಇಲ್ಲ, ಸಂಪುಟ ವಿಸ್ತರಣೆ ಬಗ್ಗೆ ದೆಹಲಿ ನಾಯಕರ ಜೊತೆ ಸಮಾಲೋಚನೆ ಮಾಡಬೇಕಿದೆ. ಅಮಿತ್ ಶಾ, ಜೆ ಪಿ ನಡ್ಡಾ ಅವರ ಜೊತೆ ಸಿಎಂ ಚರ್ಚೆ ಮಾಡಬೇಕಿದೆ. ದೊಡ್ಡ ಪ್ರಮಾಣದಲ್ಲಿ ಸಂಪುಟ ವಿಸ್ತರಣೆ ಮಾಡಲಾಗ್ತಿದೆ. ಹಾಗಾಗಿ ದೆಹಲಿ ನಾಯಕರ ಭೇಟಿ ಯಾವಾಗ ಆಗುತ್ತೋ ಆ ನಂತರವೇ ಸಂಪುಟ ವಿಸ್ತರಣೆ ಎಂದು ಇದೇ ವೇಳೆ ತಿಳಿಸಿದರು.