ಧಾರವಾಡ, ಜ. 14: ನಗರದ ವಿದ್ಯಾಗಿರಿಯ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ನಲ್ಲಿ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.
ಶಾಲೆಯ ಶಿಕ್ಷಕರು, ಮಕ್ಕಳು ಹಾಗೂ ಪಾಲಕರು ಗ್ರಾಮೀಣ ಸೊಗಡಿನ ವೇಷಭೂಷಣದಲ್ಲಿ ಹಬ್ಬದಾಚರಣೆಯಲ್ಲಿ ಪಾಲ್ಗೊಂಡಿದ್ದರು. ವಿಶೇಷ ಎಂದರೆ ಮಕ್ಕಳು ಎತ್ತಿನ ಚಕ್ಕಡಿಯಲ್ಲಿ ಶಾಲೆಗೆ ಆಗಮಿಸಿ ಆವರಣದಲ್ಲಿ ಸುತ್ತು ಹಾಕಿ ಸಂಭ್ರಮಿಸಿದರು. ಇನ್ನು ಕೆಲ ಮಕ್ಕಳು ಕೇರಳದ ಸಂಪ್ರದಾಯದಂತೆ ಓಣಂ ಆಚರಿಸಿದರು.
ಜೋಳ, ಗೋವಿನಜೋಳದ ಕಾಳಿನ ರಾಶಿಪೂಜೆ ಮಾಡುವ ಮೂಲಕ ರೈತರು ಒಕ್ಕಣೆ ಮಾಡುವ ವಾತಾವರಣ ಸೃಷ್ಟಿಯಾಗಿತ್ತು. ನಂತರ ತಾವು ತಂದಿದ್ದ ಸಜ್ಜೆ ರೊಟ್ಟಿ ಸಮೇತ ಹಬ್ಬದ ಊಟ ಸವಿದರು. ಪರಸ್ಪರ ಎಳ್ಳು- ಬೆಲ್ಲ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.