ಕೆಆರ್ ಪುರ, ಸೆ. 19: ರಾತ್ರೋರಾತ್ರಿ ಮಿಟಗಾನಹಳ್ಳಿ ಕ್ವಾರಿಯಲ್ಲಿ ಕಸ ಹಾಕುತ್ತಿರುವುದನ್ನು ಖಂಡಿಸಿ ಸ್ಥಳೀಯ ನಾಗರೀಕರು ಕಸ ತುಂಬಿದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಕಣ್ಣೂರು ಗ್ರಾ ಪಂ ವ್ಯಾಪ್ತಿಯ ಮಿಟ್ಟಗಾನಹಳ್ಳಿಯ ಕ್ವಾರಿಯಲ್ಲಿ ಮೂರು ದಿನಗಳಿಂದ ರಾತ್ರೋರಾತ್ರಿ ಸಾವಿರಕ್ಕೂ ಹೆಚ್ಚು ಲಾರಿ ಕಸ ವಿಲೇವಾರಿ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಮೀಟಗಾನಹಳ್ಳಿ ಸಮೀಪದ ಬೆಳ್ಳಳಿ ಕಲ್ಲು ಕ್ವಾರಿಗಳಲ್ಲಿ ಬಿಬಿಎಂಪಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿರುವುದರಿಂದ ನಾನಾ ಅರೋಗ್ಯ ಸಮಸ್ಯೆ, ಅಂತರ್ಜಾಲ ಕಲುಷಿತ, ಸೊಳ್ಳೆಗಳ ಉಗಮ ಸ್ಥಾನವಾಗಿದೆ.
ದುರ್ವಾಸನೆಯಿಂದ ಕೂಡಿದ್ದು, ಪರಿಸರ ಹದಗೆಟ್ಟು ಈ ಭಾಗವು ಮಾನವ ಯೋಗ್ಯವಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ಯಾವುದೇ ಕಾರಣಕ್ಕು ಕಸ ವಿಲೇವಾರಿ ಮಾಡಬಾರದೆಂದು ಆಗ್ರಹಿಸಿದರು. ಕೆರೆಗಳು ಮಲೀನವಾಗುವ ಮೂಲಕ ಜಲ ಮೂಲಕ್ಕೆ ಆಂತಕ ಎದುರಾಗಿದೆ ಎಂದು ಅಳಲು ತೊಡಿಕೊಂಡರು. ನೂರಕ್ಕು ಹೆಚ್ಚು ಕಸದ ವಾಹನಗಳ ತಡೆದು ಪ್ರತಿಭಟನೆ ಮಾಡುತ್ತಿರುವ ಸ್ಥಳೀಯರು ಕಸ ಸುರಿಯುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ಅರವಿಂದ ಲಿಂಬಾವಳಿ ಹಾಗೂ ಅರೋಗ್ಯ ಮತ್ತು ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಅಯುಕ್ತ ರಣಧೀಪ್ ಸಿಂಗ್ ಸ್ಥಳೀಯರ ಮನವೂಲಿಸಿ, ಕಣ್ಣೂರು ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಿಗೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರನ್ನು ಟ್ಯಾಂಕರ್ ಗಳ ಮೂಲಕ ಪೂರೈಸಲಾಗುವುದು.
ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುವುದು. ದುರ್ವಾಸನೆ ತಡೆಗಟ್ಟಲು ಔಷಧಿ ಸಿಂಪಡಣೆ, ವಿಶೇಷವಾಗಿ ಈ ಭಾಗದ ಕೆರೆಗಳನ್ನು ಅಭಿವೃದ್ಧಿಗೊಳಿಸಿ ಜಲ ಮೂಲ ಸಂರಕ್ಷಿಸಲಾಗುವುದು. ಮುಖ್ಯವಾಗಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುವುದು.
ಲಿಚೆಟ್ ಕೊಳಚೆ ನೀರು ಶುದ್ಧೀ ಕರಿಸಲು ಹೆಚ್ಚು ಅಧ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು. ಸೋಮವಾರದೊಳಗೆ ಮೂಲಭೂತ ಸೌಕರ್ಯಗಳ ಕಲ್ಪಿಸಬೇಕು ಇಲ್ಲದಿದ್ದರೆ ಪ್ರತಿಭಟನೆಯನ್ನು ಮತ್ತೆ ಪ್ರಾರಂಭಿಸಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಮಾರುತಿಕುಮಾರ್, ಕಣ್ಣೂರಿನ ನಂಜೇಗೌಡ, ಮೋಹನ್, ದೊಬ್ಬಗುಬ್ಬಿ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಇದ್ದರು.