ಕಲಬುರಗಿ: ಬಿಜೆಪಿ ಪ್ರಣಾಳಿಕೆ ಘೋಷಣೆಗಳ ಪುಸ್ತಕದಂತಿದ್ದು ಮೋದಿ ಫೋಟೋ ಆಲ್ಬಮ್ ತರ ಇದೆ, ಅವರ ಪಿಕ್ ನಿಕ್ನ ವಿಭಿನ್ನ ಫೋಟೋಗಳನ್ನು ಬಿಟ್ಟರೆ ಯುವಕರಿಗೆ, ಮಹಿಳೆಯರಿಗೆ, ರೈತರಿಗೆ, ಬಡವರಿಗೆ, ಶ್ರಮಿಕರಿಗೆ, ನಿರ್ಗತಿಕರಿಗೆ ಉಪಯೋಗವಾಗುವಂತಹ ಯಾವುದೇ ಅಂಶಗಳಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ತೀವ್ರ ದಾಳಿ ನಡೆಸಿದರು.
ಕಲಬುರಗಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಪ್ರಣಾಳಿಕೆಯಲ್ಲಿ ಬಡವರಿಗೆ ನಿರ್ಗತಿಕರಿಗೆ ಏನು ಕೊಡುಗೆ ಕೊಡುತ್ತೇವೆ ಅನ್ನೋದು ಇಲ್ಲ. ಕಳೆದ ಪ್ರಣಾಳಿಕೆಯಲ್ಲಿ ಮೈಸೂರನ್ನ ಪ್ಯಾರೀಸ್ ಮಾಡ್ತೀವಿ. ಆನೇಗುಂದಿ ಅಂಜನಾದ್ರಿ ಬೆಟ್ಟ ಅಭಿವೃದ್ದಿ ಎಂದದ್ರು ಈ ವಿಚಾರಗಳು ಎಲ್ಲಿ ಹೋದವು ಎಂದು ಪ್ರಶ್ನಿಸಿದರು.
ಬಿಜೆಪಿಯವರ ಪ್ರಕಾರವೇ ದೇಶದಲ್ಲಿ 30 ಲಕ್ಷ ಹುದ್ದೆ ಖಾಲಿ ಇವೆ. ಇದರ ಬಗ್ಗೆ ಮಾತನಾಡಲು ಮೋದಿ ನೇತೃತ್ವದ ಸರ್ಕಾರ ತಯಾರಿ ಇಲ್ಲ. ಸರ್ಕಾರಿ ಉದ್ಯೋಗದ ಭರ್ತಿ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಸ್ತಾಪವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.