ಬೆಂಗಳೂರು, ಮಾ. 24: ದೇಶದಾದ್ಯಂತ ಕೊರೊನಾ ವೈರಸ್ ಜನರಲ್ಲಿ ಎಲ್ಲಿಲ್ಲದ ಭಯ ಭೀತಿಯನ್ನು ಹುಟ್ಟಿಸಿದೆ. ರಾಜ್ಯದಾದ್ಯಂತ ಕೊರೊನಾ ರೋಗವನ್ನು ಓಡಿಸಲು ಕರ್ನಾಟಕ ಲಾಕ್ ಡೌನ್ ಮಾಡಲಾಗಿದೆ. ಕೊರೊನಾ ರೋಗದಿಂದ ದೂರವಿರಲು ಹಲವಾರು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಹೌದು, ಕೊರೊನಾವೈರಸ್ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದೆ. ಭಾರತಕ್ಕೂ ಮುಳುವಾಗಿ ಪರಿಣಮಿಸಿರೋ ಮಹಾಮಾರಿ ನಮ್ಮ ರಾಜ್ಯದ ಜನರನ್ನೂ ಕಂಗಾಲು ಮಾಡಿದೆ. ಘಾತುಕ ವೈರಸ್ನಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರೂ ಮಾಸ್ಕ್ಗಳ ಮೊರೆ ಹೋಗಿದ್ದಾರೆ. ಈ ವೇಳೆ ಕೊರೊನಾವೈರಸ್ ವಿರುದ್ಧ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೈದಿಗಳೂ ಸಮರ ಸಾರಿದ್ದಾರೆ. ಅದೂ ತಾವೇ ಸ್ವತಃ ಮಾಸ್ಕ್ಗಳನ್ನು ತಯಾರಿಸುವ ಮೂಲಕ.
ಕೊರೊನಾವೈರಸ್ ಪ್ರಕರಣಗಳು ಒಂದರ ಹಿಂದೊಂದರಂತೆ ಪತ್ತೆಯಾಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಮಾಸ್ಕ್ಗಳ ಕೊರತೆ ಕಾಡುತ್ತಿದೆ. ಯಾವುದೇ ಮೆಡಿಕಲ್ಸ್ಗೆ ಹೋದರೂ ಮಾಸ್ಕ್ಗಳ ಸಪ್ಲೈಯಿಲ್ಲ ಅನ್ನುವ ಮಾತು ಕೇಳಿ ಕೇಳಿ ಜನರಿಗೆ ಬೇಸರವಾಗಿ ಹೋಗಿದೆ. ಈ ಮಧ್ಯೆ, ಪರಪ್ಪನ ಅಗ್ರಹಾರದ ಜೈಲಧಿಕಾರಿಗಳು ಅಲ್ಲಿನ ಕೈದಿಗಳಿಂದಲೇ ಮಾಸ್ಕ್ಗಳನ್ನು ತಯಾರಿಸುವ ಅಭಿಯಾನಕ್ಕೆ ಮುಂದಾಗಿದ್ದಾರೆ. ಅದರಂತೆ ಪ್ರತಿದಿನ ಪರಪ್ಪನ ಕೇಂದ್ರ ಕಾರಾಗೃಹದಲ್ಲಿ ಬರೋಬ್ಬರಿ 2 ಸಾವಿರ ಮಾಸ್ಕ್ಗಳು ತಯಾರಾಗುತ್ತಿವೆ. ಈಗಾಗಲೇ ಬೆಂಗಳೂರಿನಲ್ಲಿರುವ ಪೋಲಿಸ್ ಆಯುಕ್ತರ ಕಚೇರಿ, ಪ್ರಧಾನ ಕಚೇರಿ, ಸಶಸ್ತ್ರ ಮೀಸಲು ಪಡೆ ಸೇರಿದಂತೆ ಹಲವು ಕಚೇರಿಗಳಿಗೆ ಸುಮಾರು 17 ಸಾವಿರ ಮಾಸ್ಕ್ ಗಳ ರವಾನೆಯಾಗಿದೆ.