ಶಿಡ್ಲಘಟ್ಟ: ನಗರಸಭೆ ಪೌರಾಯುಕ್ತರ ಕಾರ್ಯವೈಖರಿಯನ್ನು ಖಂಡಿಸಿ, ಕೂಡಲೇ ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನೆ  

ಶಿಡ್ಲಘಟ್ಟ: ನಗರಸಭೆ ಪೌರಾಯುಕ್ತರ ಕಾರ್ಯವೈಖರಿಯನ್ನು ಖಂಡಿಸಿ, ಕೂಡಲೇ ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನೆ  

ಶಿಡ್ಲಘಟ್ಟ, ಜು. 9 : ನಗರಸಭೆಗೆ ಪೌರಾಯುಕ್ತರಾಗಿ ಜಿ.ಎನ್.ಚಲಪತಿ ಬಂದಾಗಿನಿಂದಲೂ ನಗರದಲ್ಲಿ ಮಾಡಿರುವ ಕಳಪೆ ಕಾಮಗಾರಿಗಳೂ ಸೇರಿದಂತೆ ಅಕ್ರಮ ಬಿಲ್ ಮಾಡಿಕೊಂಡಿರುವುದರ ಬಗ್ಗೆ ಸೂಕ್ತ ತನಿಖೆಯಾಗಬೇಕು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಸಂಬಳ ನೀಡದೇ ಸತಾಯಿಸುತ್ತಿರುವ ಈ ಅಧಿಕಾರಿಯ ವರ್ತನೆಯಿಂದ ಪೌರ ಕಾರ್ಮಿಕರು ಆತ್ಮಹತ್ಯೆ ಯತ್ನ ನಡೆಸಿದ್ದಾರೆ. ಆದರೂ ಅವರ ಬಗ್ಗೆ ಗಮನಹರಿಸಿಲ್ಲ ಎಂದು ಮುಖಂಡ ಲಕ್ಷ್ಮಿನಾರಾಯಣ ಆರೋಪಿಸಿದರು.

ನಗರಸಭಾ ಸದಸ್ಯ ಎಸ್.ರಾಘವೇಂದ್ರ ಮಾತನಾಡಿ, ನಗರಸಭೆಗೆ ಸಂಬಂಧಿಸಿದ ಯಾವುದಾರೂ ಸಮಸ್ಯೆಗಳನ್ನು ಕೇಳಲು ಹೋದ ನಗರಸಭೆಯ ಸದಸ್ಯರನ್ನು ಏಕವಚನದಲ್ಲಿ ನಿಂದಿಸುವ ಜೊತೆಗೆ ಕಚೇರಿಯಿಂದ ಹೊರಹೋಗುವಂತೆ ದೌರ್ಜನ್ಯವಾಗಿ ಮಾತನಾಡುತ್ತಾರೆ.  ಈ ಅಧಿಕಾರಿ ತಾನು ಸಾರ್ವಜನಿಕರ ಸೇವಕ ಎಂಬುದನ್ನೂ ಮರೆತು ರಾಜಕೀಯ ಪಕ್ಷದ ಏಜೆಂಟರಂತೆ

ವರ್ತಿಸುತ್ತಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಈ ಹಿಂದೆ ಕೊರೆದಿರುವ ಕೊಳವೆಬಾವಿಗಳಲ್ಲಿ ನೀರು ಸಿಗದಿದ್ದರೂ ಮೋಟರ್ ಪಂಪು ಅಳವಡಿಸುವ ನೆಪದಲ್ಲಿ ಲಕ್ಷಾಂತರ ಹಣ ಬಿಲ್ ಮಾಡಿರುವ ಅನುಮಾನವಿದೆ.

ಹಿಂದಿನ ನಗರಸಭೆ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಸುಮಾರು 4 ಕೋಟಿ ರೂ ವೆಚ್ಚದಲ್ಲಿ ನಗರದಲ್ಲಿ ಕಾಮಗಾರಿಗಳನ್ನು ಮಾಡಲು ಸದಸ್ಯರು ಅನುಮೋದನೆ ನೀಡಿದ್ದರೂ, ಚುನಾವಣೆ ಮುಗಿದು ನೂತನ ಸದಸ್ಯರು ಆಯ್ಕೆಯಾದರೂ ಸಹ ಇದುವರೆಗೂ ಹಿಂದಿನ ಕಾಮಗಾರಿಗಳಿಗೆ ಚಾಲನೆ ನೀಡಿಲ್ಲ ಎಂದು ಆರೋಪಿಸಿದರು.

ಮುಖಂಡ ಎಸ್.ಎಂ.ರಮೇಶ್ ಮಾತನಾಡಿ, ನಗರದಲ್ಲಿರುವ ನೀರಿನ ಲಭ್ಯತೆಗನುಸಾರವಾಗಿ ಪ್ರತಿ ವಾರ್ಡಿಗೂ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಬಹುದು. ಆದರೆ ಪೌರಾಯುಕ್ತರು ಹಾಗು ಅಧಿಕಾರಿಗಳು ಕುಡಿಯುವ ನೀರು ಪೂರೈಸಲು ಸಹ ಒಂದು ಪಕ್ಷದ ಏಜೆಂಟರಂತೆ ರಾಜಕೀಯ ಮಾಡುವ ಮೂಲಕ ಕೆಲ ವಾರ್ಡುಗಳಿಗೆ ತಿಂಗಳಿಗೊಮ್ಮೆ ನೀರು ಪೂರೈಸುತ್ತಿದ್ದಾರೆ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ನಿಮ್ಮ ಮೇಲೆ ಕೇಸು ಹಾಕಿಸುತ್ತೇನೆ ಎಂದು ಬೆದರಿಸುತ್ತಾರೆ ಎಂದು ಆರೋಪಿಸಿ ಮನವಿ ಸಲ್ಲಿಸಿದ್ದಾರೆ.

ನಗರಸಭಾ ಸದಸ್ಯ ಎಂ.ವಿ.ವೆಂಕಟಸ್ವಾಮಿ ಮಾತನಾಡಿ, ತಾಲೂಕಿನ ಹಿತ್ತಲಹಳ್ಳಿ ಗ್ರಾಮದ ಬಳಿಯಿರುವ ಕಸ ವಿಲೇವಾರಿ ಘಟಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಘನ ತ್ಯಾಜ್ಯ ವಿಂಗಡಿಸುವ ಯಂತ್ರ ಅಳವಡಿಸುವಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಹಳೆ ಕಬ್ಬಿಣದ ಶೀಟ್ ಹಾಗು ಸರಳುಗಳನ್ನು ಬಳಸಿ ಹಣ ಲಪಟಾಯಿಸಿದ್ದು ಇದರ ತನಿಖೆಯಾಗಬೇಕು.

2018 ರ ಅಕ್ಟೋಬರ್ ತಿಂಗಳ ನಗರಸಭೆ ಖರ್ಚಿನ ವಿವರದಲ್ಲಿ ಮಾನ್ಯ ಪೌರಾಯುಕ್ತರು ಎನ್.ಎಚ್ 234 ಯೋಜನೆಯಡಿ ಕೊರೆಸಿರುವ ೩ ಕೊಳವೆಬಾವಿಗಳಿಗೆ 78,35000 ಖರ್ಚು ತೋರಿಸಿದ್ದು ಒಂದು ಕೊಳವೆ ಬಾವಿ ಕೊರೆಸಲು ಸುಮಾರು 26 ಲಕ್ಷ ಖರ್ಚು ಮಾಡಿದ್ದಾರೆಯೇ ಎನ್ನುವ ಅನುಮಾನವಿದೆ ಹಾಗಾಗಿ ಇದರ ಸಂಪೂರ್ಣ ತನಿಖೆಯಾಗಬೇಕು ಎಂದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ, ನಗರದ ಸ್ವಚ್ಚತೆ ಕಾಪಾಡಬೇಕಾದ ನಗರಸಭೆ ಸಿಬ್ಬಂದಿಯೇ ನಗರದ ಯುಜಿಡಿ ಸಂಪರ್ಕವನ್ನು ಅಗೆದು ಚರಂಡಿಗೆ ಬಿಟ್ಟಿರುವುದರಿಂದ ನಗರದ ಗೌಡನಕೆರೆ, ರಾಘವೇಂದ್ರ ಸ್ವಾಮಿ ದೇವಾಲಯದ ಹಿಂಬಾಗದ ಮೋರಿಯಲ್ಲಿ ಸಂಗ್ರಹವಾಗುವುದರಿಂದ ನಗರದ ಮಧ್ಯ ಬಾಗದಲ್ಲಿ ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ನಗರದ ಸ್ವಚ್ಚತೆ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಎಂದು ಆರೋಪಿಸಿದರು.

ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿರುವ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸಲು ಕೆ.ಎಂ.ಎ.ಎಸ್ ಗ್ರೇಡ್ ಅಧಿಕಾರಿಯನ್ನು ನಿಯೋಜಿಸಬೇಕು.

ಒಂದು ಪಕ್ಷದ ಕೆಲವೇ ಕೆಲ ಮುಖಂಡರ ಗುಂಪು ಕಟ್ಟಿಕೊಂಡು ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಹಾಗು ವಿವಿಧ ಅನುಧಾನಗಳಲ್ಲಿ ಅಕ್ರಮ ನಡೆಸಿ ಹಣ ಮಾಡುವ ದಂಧೆಗೆ ಇಳಿದಿರುವ ಜಿ.ಎನ್.ಚಲಪತಿ ರನ್ನು ಪೌರಾಯುಕ್ತ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ನಗರಸಭಾ ಸದಸ್ಯ ನಾರಾಯಣಸ್ವಾಮಿ, ಮುಖಂಡ ನಂದುಕಿಶನ್, ಜಬೀವುಲ್ಲಾ, ಕೆಂಪರೆಡ್ಡಿ, ಎಲ್.ಮಂಜುನಾಥ್, ರಾಮಚಂದ್ರಪ್ಪ, ಮಕ್ಸೂದ್ ಹುಸೇನ್, ಸಿಕಂದರ್, ವೆಂಕಟರಾಜು, ಮುಂತಾದವರು ಹಾಜರಿದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos