ಬೆಂಗಳೂರು:
ಪೊಲೀಸರಂದ್ರೇ ಜನರಿಗೆ ಒಂದ್ರೀತಿ ಭಯವೂ ಇರುತ್ತೆ. ಹಾಗೇ ಅವರ ಮೇಲೆ ಸಾಕಷ್ಟು ಆರೋಪಗಳೂ ಕೇಳಿ ಬರ್ತವೆ. ಆದರೆ, ಸದಾ ಒತ್ತಡದಲ್ಲಿರುವ ಪೊಲೀಸರಲ್ಲೂ ಒಳ್ಳೇ ಮನಸ್ಸು, ಒಳ್ಳೇ ಗುಣ ಜತೆಗೆ ಮನುಷ್ಯತ್ವವೂ ಇರುತ್ತೆ. ಒಬ್ಬೊಬ್ಬ ಕವಿ ಹೃದಯಿ ಅಷ್ಟೇ ಏಕೆ ಒಳ್ಳೇ ಹಾಡಗಾರರೂ ಪೊಲೀಸ್ ಇಲಾಖೆಯಲ್ಲಿ ಎಲೆಮರೆಕಾಯಿಯಂತಿರುತ್ತಾರೆ. ಇಲ್ಲೊಬ್ಬ ಎಸ್ಐ ಸಾಹೇಬರು ಸಂಚಾರಿ ನಿಯಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜತೆಗೇ ಒಳ್ಳೇ ದನಿಯಿಂದ ಕೇಳುಗರನ್ನ ಇಂಪ್ರೆಸ್ ಮಾಡ್ತಿದ್ದಾರೆ. ಇವರ ಹಾಡು ಕೇಳಿದವರು ಫಿದಾ ಆಗ್ತಿದ್ದಾರೆ.
ದೊಡ್ಡಬಳ್ಳಾಪುರ ದಲ್ಲಿ ನಗರ ದೇವತೆ ಮುತ್ಯಾಲಮ್ಮನ ಉತ್ಸವ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಸ್ಐ ವೆಂಕಟೇಶ್ ಆಮಿಸಿ ಜನರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿದ್ದರು. ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು,ಇನ್ಸೂರೆನ್ಸ್ ಮಾಡಿಸಿರಬೇಕು. ಒಂದು ವೇಳೆ ಇನ್ಸೂರೆನ್ಸ್ ಮಾಡಿಸದಿದ್ರೇ ಬೈಕ್ನ ಜಪ್ತಿ ಮಾಡುವುದಾಗಿ ಎಚ್ಚರಿಸಿದರು. ನಂತರ ಪ್ರೇಕ್ಷಕರ ಒತ್ತಾಯದ ಮೇರೆಗೆ ನಟ ಶಂಕರ್ನಾಗ್ ಅಭಿನಯದ ಹೊಸಜೀವನ ಸಿನಿಮಾದ ಅನಾಥ ಮಗುವಾದೆ ಹಾಡನ್ನು ಹಾಡಿದರು. ಎಸ್ಐ ಸಾಹೇಬ್ರ ಹಾಡಿಗೆ ಜನ ಫುಲ್ ಫಿದಾ ಆಗಿ ಹುಚ್ಚೆದ್ದು ಕುಣಿದರು. ಪೊಲೀಸ್ ಅಧಿಕಾರಿಯ ಪ್ರತಿಭೆ ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.