ಮಹಿಳಾ ಶಕ್ತಿಗೆ ಮತ್ತಷ್ಟು ಬಲ ತುಂಬಿದ ಪ್ರಧಾನಿ : ಭಾರತಿ ಶೆಟ್ಟಿ

ಮಹಿಳಾ ಶಕ್ತಿಗೆ ಮತ್ತಷ್ಟು ಬಲ ತುಂಬಿದ ಪ್ರಧಾನಿ : ಭಾರತಿ ಶೆಟ್ಟಿ

ಬೆಂಗಳೂರು: ದೇಶದ ಸೇವಕರಾಗಿ ಗುರುತಿಸಿಕೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹಿಳಾ ಶಕ್ತಿಗೆ ಶಕ್ತಿಯಾಗಿ ನಿಂತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯೆ ಶ್ರೀಮತಿ ಭಾರತಿ ಶೆಟ್ಟಿ ಅವರು ವಿಶ್ಲೇಷಣೆ ಮಾಡಿದರು.
“ರಾಜಕೀಯ ರಂಗದಲ್ಲಿ ಮಹಿಳಾ ಮೀಸಲಾತಿ”ಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದ ಮುಂಭಾಗದಲ್ಲಿ ಇಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ವತಿಯಿಂದ ನಡೆದ ಸಂಭ್ರಮಾಚರಣೆ ಸಂದರ್ಭದಲ್ಲಿ ಅವರು ಮಾತನಾಡಿದರು.
ಅಟಲ್‍ಜಿ ಅವರು ಪ್ರಧಾನಿ ಆಗಿದ್ದಾಗ ಈ ಮಸೂದೆ ಅಂಗೀಕಾರವಾಗುವ ನಿರೀಕ್ಷೆ ಇತ್ತು. ಸೋನಿಯಾ ಗಾಂಧಿಯವರು ಮನಸ್ಸು ಮಾಡಿದ್ದರೆ ಅದು ಅನುಷ್ಠಾನಕ್ಕೆ ಬರುತ್ತಿತ್ತು ಎಂದರು. ಕನಸನ್ನು ಎಲ್ಲರೂ ಕಾಣುತ್ತಾರೆ. ಅದಕ್ಕೆ ದುಡ್ಡು ಕೊಡಬೇಕಾಗಿಲ್ಲ. ಕನಸನ್ನು ನನಸು ಮಾಡುವ ಛಲವನ್ನು ಹಾಗೂ ಪ್ರಾಮಾಣಿಕತೆಯನ್ನು ನರೇಂದ್ರ ಮೋದಿಯವರು ತೋರಿಸಿದ್ದಾರೆ ಎಂದು ವಿಶ್ಲೇಷಿಸಿದರು.
ವಿಧವಾ ವೇತನ, ಹಾಲಿಗೆ ಪ್ರೋತ್ಸಾಹಧನ ಮತ್ತಿತರ ಯೋಜನೆಗಳು ಮತ್ತು ಕೊಡುಗೆಗಳು ಶಾಶ್ವತವಲ್ಲ. ಮಹಿಳೆಯರಿಗೆ ಗೌರಿ ಗಣೇಶ ಹಬ್ಬದ ದಿನ ಅಭೂತಪೂರ್ವ ಉಡುಗೊರೆಯನ್ನು ನರೇಂದ್ರ ಮೋದಿಯವರು ನೀಡಿದ್ದಾರೆ. ಇದು ದೇಶಕ್ಕೆ ಕೊಟ್ಟ ವಿಶೇಷ ಶಾಶ್ವತ ಉಡುಗೊರೆ ಎಂದು ತಿಳಿಸಿದರು.
ಮಹಿಳೆಯರ ಮೀಸಲಾತಿಗೆ ಸಂಬಂಧಿಸಿ 2 ಸಮಿತಿಗಳು ವರದಿ ನೀಡಿದ್ದವು. ತ್ರಿವಳಿ ತಲಾಖ್ ರದ್ದು ಮಾಡಲು ಆ ಸಮಿತಿ ಶಿಫಾರಸು ಮಾಡಿತ್ತು. ಸಮಾನ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಮಾಡಲು ಆಶಯ ವ್ಯಕ್ತಪಡಿಸಲಾಗಿತ್ತು ಎಂದು ಅವರು ವಿವರಿಸಿದರು.
ದೇವೇಗೌಡರು ಆರಂಭದಲ್ಲಿ ಇದನ್ನು ಸದನದಲ್ಲಿ ಮಂಡಿಸಿದ್ದರು. ಬಳಿಕ ಒಟ್ಟು 3 ಬಾರಿ ಮಸೂದೆ ಮಂಡನೆ ಆದರೂ ಅದರ ಜಾರಿಗೆ ಒಪ್ಪಿಗೆ ಲಭಿಸಲಿಲ್ಲ. ರಾಜಕಾರಣದಲ್ಲಿ ಮಹಿಳಾ ಮೀಸಲಾತಿ ವಿಚಾರದಲ್ಲಿ ಕಳ್ಳಾಟ ನಡೆದಿತ್ತು ಎಂದು ಆಕ್ಷೇಪಿಸಿದರು.
ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಯಡಿಯೂರಪ್ಪ ಅವರು ಹೆಚ್ಚಳ ಮಾಡಿದ್ದರು. ರಾಜೀವ್ ಗಾಂಧಿಯವರು ಸ್ಥಳೀಯ ಸಂಸ್ಥೆಗಳಲ್ಲಿ ಶೇ 33ರಷ್ಟು ಮೀಸಲಾತಿ ನೀಡಿದ್ದರು ಎಂದು ವಿವರಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಸಂಸದರ ಬಲ ಇದ್ದರೂ ಅದು ಮಹಿಳಾ ಮೀಸಲಾತಿ ವಿಚಾರದಲ್ಲಿ ತಾಕತ್ತು ತೋರಿಸಲಿಲ್ಲ ಎಂದು ಅವರು ಆಕ್ಷೇಪಿಸಿದರು.
ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದ, ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮ ವ್ಯಕ್ತಪಡಿಸಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos